ಬೆಳಗಾವಿ :ತರಬೇತಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬ ಸೈನಿಕನಿಗೆ ವೃತ್ತಿಯಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಶಿಸ್ತು ಮತ್ತು ದೈಹಿಕ ಸಾಮರ್ಥ್ಯ ಅತ್ಯಂತ ಮುಖ್ಯವಾಗಿರುತ್ತದೆ. ಇದನ್ನು ಕಾಪಾಡಿಕೊಳ್ಳಬೇಕು ಎಂದು ಮರಾಠಾ ಲಘು ಪದಾತಿದಳದ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ ಉಪಾಧ್ಯ ಹೇಳಿದರು.
ಇಲ್ಲಿನ ಮರಾಠಾ ಲಘು ಪದಾತಿದಳ(ಎಂಎಲ್ಐಆರ್ಸಿ)ದಲ್ಲಿ ಶನಿವಾರ ಜರುಗಿದ ಅಗ್ನಿಫಥ್ ಯೋಜನೆಯಡಿ ತರಬೇತಿ ಪೂರ್ಣಗೊಳಿಸಿದ ಅಗ್ನಿವೀರರ 7ನೇ ಬ್ಯಾಚ್ನ ಪ್ರಮಾಣ ವಚನ ಸ್ವೀಕಾರದಲ್ಲಿ ಪೆರೇಡ್ ಪರಿವೀಕ್ಷಣೆ ಕೈಗೊಂಡು ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಬೆಳಗಾವಿಯ ಮರಾಠಾ ಲಘು ಪದಾತಿದಳವು ಅತ್ಯಂತ ಹಳೇ ಮತ್ತು ಪ್ರತಿಷ್ಠಿತ ರೆಜಿಮೆಂಟ್ಗಳಲ್ಲಿ ಒಂದಾಗಿದೆ. ಈ ಹೆಮ್ಮೆಯ ಇತಿಹಾಸ ಮತ್ತು ವೀರ ಪರಂಪರೆಯನ್ನು ಇಲ್ಲಿ ತರಬೇತಿ ಪೂರ್ಣಗೊಳಿಸಿದ ಸೈನಿಕರು ಸದಾ ನೆನಪಿನಲ್ಲಿಡಬೇಕು ಎಂದು ಕಿವಿಮಾತು ಹೇಳಿದರು.
ಒಟ್ಟು 24 ವಾರ ಕಠಿಣ ಮಿಲಿಟರಿ ತರಬೇತಿ ಅಧಿಕೃತವಾಗಿ ಮುಕ್ತಾಯಗೊಳಿಸಿರುವ 765 ಅಗ್ನಿವೀರರು ವಿವಿಧ ಧರ್ಮ ಗ್ರಂಥಗಳು, ರಾಷ್ಟ್ರಧ್ವಜ, ಎಂಎಲ್ಐಆರ್ಸಿ ಧ್ವಜದ ಸಾಕ್ಷಿಯಾಗಿ ದೇಶಸೇವೆಯ ಪ್ರಮಾಣ ವಚನ ಸ್ವೀಕರಿಸಿದರು. ಅಗ್ನಿವೀರ ಸಂಕೇತ ಸಿಂಗ್ ಪೆರೇಡ್ ಮುನ್ನಡೆಸಿದರು. ಮೇಜರ್ ಗಜಾನನ ಪಾಟೀಲ ಪೆರೇಡ್ ಅಡ್ಜುಟೆಂಟ್ ಕಾರ್ಯನಿರ್ವಹಿಸಿದರು. ತರಬೇತಿ ಅವಧಿಯಲ್ಲಿನ ಅತ್ಯುತ್ತಮ ಅಗ್ನಿವೀರ ಆಗಿ ಹೊರಹೊಮ್ಮಿದ ಘೋಲಪ್ ಆದರ್ಶಗೆ ‘ನಾಯ್ಕ ಯಶವಂತ ಗಾಡಗೆ-ವಿಕ್ಟೋರಿಯಾ ಕ್ರಾಸ್ ಮೆಡಲ್’ ನೀಡಲಾಯಿತು
.
ಪೆರೇಡ್ ಮುಕ್ತಾಯದ ಬಳಿಕ ಶರ್ಕತ್ ಯುದ್ಧ ಸ್ಮಾರಕಕ್ಕೆ ತೆರಳಿದ ಅಧಿಕಾರಿಗಳು ಮತ್ತು ನೂತನ ಸೈನಿಕರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಪುಷ್ಪಗುಚ್ಛ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ, ತಮ್ಮ ಮಕ್ಕಳನ್ನು ದೇಶಸೇವೆಗೆ ಕಳುಹಿಸಿ ಪ್ರೇರೇಪಿಸಿದ ಪಾಲಕರಿಗೆ ಗೌರವ ಪದಕ ನೀಡಿ ಸನ್ಮಾನಿಸಲಾಯಿತು.
Laxmi News 24×7