ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯನ್ನು ಎಂಜಿನಿಯರ್ವೊಬ್ಬರು ಸಮಯಪ್ರಜ್ಞೆಯಿಂದ ಮನವೊಲಿಸಿ ಕಾಪಾಡಿರುವ ಘಟನೆ ಭಾನುವಾರ ನಡೆದಿದೆ.
ಮೈಸೂರಿನ ಶ್ರೀರಾಮಪುರದ ಬೇಬನ್ ಲೇಔಟ್ನ ನಿವಾಸಿ ಆಂಜನೇಯ(47) ಎಂಬವರು ಸೇತುವೆ ಮೇಲಿಂದ ಶರಾವತಿ ಹಿನ್ನೀರಿಗೆ ಜಿಗಿಯಲು ಹೋಗಿದ್ದರು. ಈ ವೇಳೆ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ರಂಜೇಶ್ ಪಾಂಡೆ ಅವರು ನೀರಿಗೆ ಹಾರುವುದನ್ನು ತಪ್ಪಿಸಲು ಯತ್ನಿಸಿದ್ದಾರೆ. ಆಗ, ತಾನು ನಿದ್ರೆ ಮಾತ್ರೆ ತೆಗೆದುಕೊಂಡಿದ್ದಾಗಿ ಆಂಜನೇಯ ಹೇಳಿದ್ದಾರೆ. ನಂತರ ಮನವೊಲಿಸಿದ ರಂಜೇಶ್, ಅವರನ್ನು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆಂಜನೇಯರಿಗೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಭಾಷೆ ಬೇರೆಯಾದರೂ, ಜೀವ ಉಳಿಸಿದ ಮನುಷ್ಯತ್ವ: ಆತ್ಮಹತ್ಯೆಗೆ ಯತ್ನಿಸಿದ್ದ ಆಂಜನೇಯ ಮೈಸೂರಿನ ಲೆಕ್ಕಪರಿಶೋಧಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಇವರು ಜೀವನದಲ್ಲಿ ಯಾವ ಕಾರಣಕ್ಕೆ ಜುಗುಪ್ಸೆಗೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಭಾನುವಾರ ಬೆಳಗ್ಗೆ ಮೈಸೂರಿನಿಂದ ಸಿಗಂದೂರಿಗೆ ಆಗಮಿಸಿದ್ದರು. ಬಳಿಕ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದುಕೊಂಡು ನಂತರ ಸೇತುವೆ ಕಡೆ ಬಂದಿದ್ದರು.
Laxmi News 24×7