Breaking News

ನನ್ನ ಮನೆಯ ಬಳಿ ಮಹಜರು ನಾಟಕ – ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್‌ ರಾಜ್‌ ಕಿಡಿ

Spread the love

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಕೈ ಬಿಟ್ಟಿದ್ದಕ್ಕೆ ಎರಡನೇ ವಿಡಿಯೋ ಮಾಡಿ ಚುನಾವಣಾ ಆಯೋಗದವಿರುದ್ಧ ನಟ ಪ್ರಕಾಶ್‌ ರಾಜ್‌ ಕಿಡಿಕಾರಿ ಹಲವು ಪ್ರಶ್ನೆ ಕೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?
ನಿಮ್ಮ ವೆಬ್‌ಸೈಟ್‌ನಲ್ಲಿ ನನ್ನ ಮತದಾರರ ಗುರುತಿನ ಚೀಟಿ  ಖಾಯಂ ಆಗಿ ವರ್ಗಾವಣೆಯಾಗಿದೆ ಹಾಗಾಗಿ ಫಾರ್ಮ್ 6 ಭರ್ತಿ ಮಾಡಿ ಹೊಸ ಐಡಿಗೆ ಅರ್ಜಿ ಸಲ್ಲಿಸಿ ಎಂದು ತೋರಿಸಿದ್ದು ನಿಜವಲ್ಲವೇ? ಈ ವಿಷಯವನ್ನು ನಾನು ಪ್ರಸ್ತಾಪಿಸಿ ಲಕ್ಷಾಂತರ ಜನರಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಧಿಕಾರಿಗಳು ನನಗೆ ಕರೆ ಮಾಡಿ ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿ, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲು ವಿನಂತಿಸಿದ್ದು ಹೌದಲ್ಲವೇ? ಆದರೆ ಅದೇ ದಿನ ಸಂಜೆ ಪ್ರೆಸ್ ಮೀಟ್ ಕರೆದು ಅದು ವರ್ಗಾವಣೆಯಾಗಿದೆ ಡಿಲೀಟ್ ಆಗಿಲ್ಲ ಎಂದು ಸುಳ್ಳು ಹೇಳಿದಿರಿ.

ವಿಷಯ ಕೈಮೀರಿ ಹೋದ ತಕ್ಷಣ ರಾತ್ರಿ 8:30ಕ್ಕೆ ಬಿಎಲ್‌ಒ ನೌಕರರನ್ನು ಕ್ಯಾಮೆರಾದೊಂದಿಗೆ ನನ್ನ ಹಳೆಯ ಮನೆ ವಿಳಾಸಕ್ಕೆ ಕಳುಹಿಸಿ, ನೆರೆಹೊರೆಯವರನ್ನು ಕರೆದು ಮಹಜರು ನಡೆಸುವ ನಾಟಕ ಮಾಡಿದಿರಿ. ನಂತರ ಅದನ್ನು ಗೋದಿ ಮೀಡಿಯಾ ಹಾಗೂ ಬಿಜೆಪಿ ಹ್ಯಾಂಡಲ್‌ಗಳಿಗೆ ನೀಡಿ ಪ್ರಕಾಶ್ ರಾಜ್ ಹೇಳಿದ್ದು ತಪ್ಪು ಎಂದು ಬಿಂಬಿಸಲು ಯತ್ನಿಸಿದಿರಿ.

ನಾನು ನನ್ನ ವೃತ್ತಿಯಿಂದಾಗಿ ನಟ/ಸೆಲೆಬ್ರಿಟಿಯಾಗಿರಬಹುದು. ಆದರೆ ಈ ನಾಗರಿಕನಾಗಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ನಾನು ಸಮಾನ. ಈ ಹೋರಾಟ ಪ್ರತಿಯೊಬ್ಬ ನಾಗರಿಕನ ಆತ್ಮಗೌರವ ಮತ್ತು ಮತದಾನದ ಹಕ್ಕಿನ ಹೋರಾಟವಾಗಿದೆ.

ಐದು ವರ್ಷಕ್ಕೊಮ್ಮೆ ಮತದಾರರ ಮುಂದೆ ಬಂದು ಓಟಿಗಾಗಿ ಕೈಮುಗಿದು ಬೇಡುತ್ತೀರಿ. ಆದರೆ ಈಗ ಅದೇ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಲಿನಲ್ಲಿ ನಿಂತು ಭಿಕ್ಷೆ ಬೇಡುವಂತೆ ಮಾಡುತ್ತಿದ್ದೀರಲ್ಲಾ? ಇದೇನು ನಾಟಕ? ಇದೇನು ರಾಜಕೀಯ? ನಿಮ್ಮ ಅಜೆಂಡಾ ಏನು? ಎಂದು ಪ್ರಶ್ನಿಸಿದ್ದಾರೆ.

ಏನಿದು ವಿವಾದ?
ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂದು ವಿಡಿಯೋ ಮೂಲಕ ಪ್ರಕಾಶ್‌ ರಾಜ್‌ ಆರೋಪ ಮಾಡಿದ್ದರು. ಈ ಆರೋಪವನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ತಳ್ಳಿಹಾಕಿ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿತ್ತು.

ಪ್ರಕಾಶ್ ರಾಜ್ ಅವರು ತಮ್ಮ ನೋಂದಾಯಿತ ವಿಳಾಸದಲ್ಲಿ ವಾಸವಾಗಿರದ ಕಾರಣ ಚುನಾವಣಾ ಆಯೋಗದ  ನಿಯಮಗಳ ಪ್ರಕಾರ ಅವರ ಹೆಸರನ್ನು ‘ಸ್ಥಳಾಂತರಗೊಂಡಿದೆ’ ಎಂಬುದಾಗಿ ನಮೂದಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್ ತಿಳಿಸಿದ್ದರು.

ಪ್ರಕಾಶ್ ರಾಜ್ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗಾರ್ಡನ್ ಅಪಾರ್ಟ್‌ಮೆಂಟ್ ವಿಳಾಸದಲ್ಲಿ ನೋಂದಣಿಯಾಗಿದ್ದರು. ಆದರೆ ಬೂತ್ ಮಟ್ಟದ ಅಧಿಕಾರಿ ಪರಿಶೀಲನೆ ನಡೆಸಿದಾಗ, ಅವರು ಕಳೆದ 4 ವರ್ಷಗಳಿಂದ ಆ ವಿಳಾಸದಲ್ಲಿ ವಾಸವಿಲ್ಲದಿರುವುದು ಹಾಗೂ ಸ್ಥಳಾಂತರಗೊಂಡಿರುವುದು ಕಂಡುಬಂದಿತ್ತು. ಅಪಾರ್ಟ್‌ಮೆಂಟ್ ಮಾಲೀಕರು ಮತ್ತು ಪ್ರಾಪರ್ಟಿ ಮ್ಯಾನೇಜರ್ ಅವರ ಹೇಳಿಕೆ ಹಾಗೂ ಮಹಜರು ಆಧಾರದ ಮೇಲೆ, ಭಾರತೀಯ ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅವರ ಹೆಸರನ್ನು ಸ್ಥಳಾಂತರಗೊಂಡಿದೆ ಎಂದು ಗುರುತಿಸಿತ್ತು.

ಪಾಲಿಕೆ ಅಧಿಕಾರಿಗಳು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾಗ ಅವರು ಪ್ರಸ್ತುತ ಅದೇ ಶಾಂತಿನಗರ ಕ್ಷೇತ್ರದ ಬೇರೊಂದು ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದರು.


Spread the love

About Laxminews 24x7

Check Also

ವಾಲ್ಮೀಕಿ ಸಮಾಜದ ಬಗ್ಗೆ ಗೌರವವಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡಲಿ: ವಿಜಯೇಂದ್ರ

Spread the loveಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಹಾಗೂ ಸಚಿವ ಬಿ. ನಾಗೇಂದ್ರ  ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ