ಶಿರಸಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮುಗಿಸಿದ ವ್ಯಕ್ತಿಯೋರ್ವ ಕೇವಲ 200 ರೂ.ಗಳಿಗೆ ತನ್ನದೇ ಜೊತೆ ಕೆಲಸ ಮಾಡುವ ಇನ್ನೊಂದು ವ್ಯಕ್ತಿಯನ್ನು ಗುದ್ದಲಿಯಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಆರೋಪಿಯನ್ನು ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಕಮಟಗೇರಿಯಲ್ಲಿ ಗುರುವಾರ ರಾತ್ರಿ ಭೀಕರ ಕೊಲೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಕಮಟಗೇರಿಯ ಮಂಜುನಾಥ ಬಸಯ್ಯ ಚನ್ನಯ್ಯ ಈ ಹಿಂದೆಯೂ ಕೊಲೆ ಪ್ರಕರಣದಲ್ಲಿಯೇ ಜೀವಾವಧಿ ಶಿಕ್ಷೆ ಅನುಭವಿಸಿ ಹೊರ ಬಂದಿದ್ದ. ಈಗ ಮದ್ಯದ ನಶೆಯಲ್ಲಿ ಹಣಕ್ಕಾಗಿ ಅದೇ ಗ್ರಾಮದ ರವೀಶ್ ಗಣಪತಿ ಚನ್ನಯ್ಯ (35) ನನ್ನು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಶಿರಸಿ ತಾಲೂಕಿನ ಸೋಂದಾ ಕ್ರಾಸ್ ಸಮೀಪ ಶುಕ್ರವಾರ ಬಂಧಿಸಲಾಗಿದೆ.
ಗುರುವಾರ ರಾತ್ರಿ 8.30ರ ವೇಳೆಗೆ ಕಮಟಗೇರಿಯ ವಾದಿರಾಜ ಮಠದ ಕಮಾನಿನ ಬಳಿಯಲ್ಲಿ ಮದ್ಯದ ನಶೆಯಲ್ಲಿ ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ನಡುಗೆ ಜಗಳ ನಡೆದಿದೆ. ಕೂಲಿ ಹಣ 500 ರೂ. ಕೊಡುವುದು ಬಾಕಿಯಿದ್ದು, ಅದರಲ್ಲಿ ರವೀಶ್ ಕೊಲೆ ಆರೋಪಿಗೆ 300 ರೂ. ನೀಡಿದ್ದಾರೆ. ಆದರೆ ಇನ್ನೂ 200 ರೂ. ನೀಡದ ಕಾರಣ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಕೊಲೆ ಆರೋಪಿ ಮಂಜುನಾಥ ಬಸಯ್ಯ ಚನ್ನಯ್ಯಗೆ 2002ರಲ್ಲಿ ತನ್ನ ಹೆಂಡತಿಯ ಅಪ್ಪ (ಮಾವ) ನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು. 2016ರಲ್ಲಿ 14 ವರ್ಷಗಳ ಜೀವಾವಧಿ ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದಿದ್ದ ಮಂಜುನಾಥ್, ರವೀಶ್ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದರೆ ಕೆಲಸ ಕೊಟ್ಟ ರವೀಶ್ ಜೊತೆ ಮದ್ಯದ ನಶೆಯಲ್ಲಿ ಕೂಲಿ ಹಣಕ್ಕಾಗಿ ಗಲಾಟೆ ಮಾಡಿ, ಕೊಲೆ ಮಾಡಿದ್ದಾನೆ.
ಕಮಟಗೇರಿಯ ಆರೋಪಿ ಮನೆಯ ಮುಂಭಾಗದಲ್ಲಿಯೇ ಕೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಗ್ರಾಮೀಣ ಠಾಣೆ ಪಿಎಸ್ಐ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7