ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಹಠಾತ್ ಹೃದಯಾಘಾತ ಪ್ರಕರಣಗಳು ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಇಂದು ಪ್ರಶ್ನೋತ್ತರದ ವೇಳೆ ಹಿರಿಯ ಶಾಸಕ ಹೆಚ್. ಡಿ ರೇವಣ್ಣ ಅವರ ಪರವಾಗಿ ಶಾಸಕ ಎ. ಮಂಜು ಅವರು ಈ ಬಗ್ಗೆ ಸರ್ಕಾರದ ಗಮನ ಸೆಳೆದರು.
ಹಾಸನ ಜಿಲ್ಲೆಯಲ್ಲಿ 41ಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದ ಸಂಭವಿಸಿದೆ. ತುರ್ತು ಹೃದ್ರೋಗ ಚಿಕಿತ್ಸೆಗೆ ಕ್ಯಾತ್ಲ್ಯಾಬ್ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಆದರೆ, ಅನುದಾನ ಲಭ್ಯತೆ ಆಧರಿಸಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದೆ. ಹೀಗಾದರೆ ಜನರನ್ನು ಉಳಿಸಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು.
ಪ್ರಶ್ನೋತ್ತರದ ಆರಂಭದಲ್ಲೇ ಸರದಿಯಲ್ಲಿದ್ದ ಶಾಸಕರು ಸದನದಲ್ಲಿ ಲಭ್ಯವಿರಲಿಲ್ಲ. ಆ ನಂತರ ಎ. ಮಂಜು ಅವರ ಕೊನೆ ಹಂತದಲ್ಲಿ ಪ್ರಶ್ನೆ ಕೇಳುವ ವೇಳೆಯಲ್ಲಿ ಸಚಿವರು ಹಾಜರಿರಲಿಲ್ಲ. ಹೀಗಾಗಿ ಹೃದಯಾಘಾತದ ವಿಷಯ ಪ್ರಸ್ತಾಪವಾಯಿತೇ ಹೊರತು ಸರ್ಕಾರದ ಪರವಾಗಿ ಸ್ಪಷ್ಟ ಉತ್ತರ ಸಿಗಲಿಲ್ಲ.
ಈ ವೇಳೆ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಹೃದಯಾಘಾತದ ಪ್ರಕರಣಗಳು ಹೆಚ್ಚಾದ ವೇಳೆಯಲ್ಲಿ ನಾನು ಹಾಸನಕ್ಕೆ ಭೇಟಿ ನೀಡಿದ್ದೆ, 75ಕ್ಕೂ ಹೆಚ್ಚು ಸಾವಾಗಿವೆ. ಇದರ ಅಧ್ಯಯನಕ್ಕೆ ರಚಿಸಲಾಗಿದ್ದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ಅವರು ವರದಿ ನೀಡಿದ್ದು, ಹೃದಯಾಘಾತ ಪ್ರಕರಣದಲ್ಲಿ ಹಾಸನ ಜಿಲ್ಲೆ ಅಪಾಯದ ಸ್ಥಿತಿಯಲ್ಲಿದೆ ಎಂದಿದ್ದಾರೆ. ಸರಿಯಾದ ಚಿಕಿತ್ಸೆ ಸೌಲಭ್ಯವಿಲ್ಲ. ಇಲ್ಲಿಂದ ಮೈಸೂರಿಗೆ 3 ಗಂಟೆ ಹಾಗೂ ಬೆಂಗಳೂರಿಗೆ 4 ಗಂಟೆ ಪ್ರಯಾಣಿಸಬೇಕಾಗುತ್ತದೆ. ಇಲ್ಲಿ ಸಾಕಷ್ಟು ವೈದ್ಯರ ಸೌಲಭ್ಯವೂ ಇಲ್ಲ. ಚಿಕ್ಕಮಗಳೂರು ಜನರೂ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ ಎಂದು ಹೇಳಿದರು.
40ಕ್ಕಿಂತ ಕಡಿಮೆ ವಯಸ್ಸಿನ 26 ಮಂದಿ ಸಾವು: ನಂತರ ಮಾತನಾಡಿದ ಶಾಸಕ ಸುರೇಶ್ ಕುಮಾರ್, 40ಕ್ಕಿಂತ ಕಡಿಮೆ ವಯಸ್ಸಿನ 26 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಒಂದಕ್ಕಿಂತ ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಚಿಕ್ಕಮಕ್ಕಳಲ್ಲೂ ಈ ಅಪಾಯದ ಸನ್ನಿವೇಶವಿದೆ ಎಂದು ಹೇಳಿದರು.
ವ್ಯಾಪಕ ತಪಾಸಣೆ ನಡೆಸಿ, ಸಿಪಿಆರ್ ಪ್ರಾಥಮಿಕ ಚಿಕಿತ್ಸೆಯ ಪ್ರಕಾರ ತರಬೇತಿ ಕೊಡಿಸಿ ಎಂದು ಅವರು ಈ ವೇಳೆ ಸಲಹೆ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವರ ಅನುಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ಗುಂಡೂರಾವ್ ಪ್ರತಿಕಿಯೆ ನೀಡಿ, ಹಾಸನದಲ್ಲಿ ಕ್ಯಾತ್ಲ್ಯಾಬ್ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಅದರ ವೆಚ್ಚ ಪರಿಷ್ಕರಣೆಯ ಬಗ್ಗೆ ಪ್ರಸ್ತಾವನೆ ವಾಪಸ್ ಕಳುಹಿಸಲಾಗುವುದು. ಮುಂದಿನ ಸಂಪುಟದಲ್ಲಿ ಅನುಮೋದನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಎಲ್ಲವೂ ಹೃದಯಾಘಾತಕ್ಕೆ ಕಾರಣ: ಹೃದ್ರೋಗಕ್ಕೆ ಜೀವನಶೈಲಿ, ಆಹಾರ ಪದ್ದತಿ, ಒತ್ತಡದ ಜೀವನ, ಸರಿಯಾಗಿ ನಿದ್ದೆ ಇಲ್ಲದಿರುವುದು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ ಸಚಿವರು, ಚಾಲಕರಲ್ಲಿ ಹೆಚ್ಚಿನ ಅಪಾಯ ಕಂಡುಬರುತ್ತಿದೆ. ಹಾಗಾಗಿ ಚಾಲಕರಿಗೆ ವಿಶೇಷ ಆರೋಗ್ಯ ತಪಾಸಣೆ ನಡೆಸಲಾಗುವುದು. ಆಟೋ ಮತ್ತು ಕ್ಯಾಬ್ ಚಾಲಕರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಶಾಲಾ ಮಕ್ಕಳಲ್ಲೂ ಮಾನಸಿಕ ಒತ್ತಡ ಕಂಡುಬರುತ್ತಿದೆ. ಅವರಿಗೂ ವಿಶೇಷ ತಪಾಸಣೆ ಆಯೋಜಿಸಲು ನಿರ್ಧರಿಸಿದ್ದು, ಹೃದ್ರೋಗವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
Laxmi News 24×7