ಬೆಂಗಳೂರು: ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ಊಟ ನೀಡಲು ಉದ್ದೇಶಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಯೋಜನೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಯೋಜನೆಯ ಸ್ವರೂಪ, ಖರ್ಚು, ಅನುಷ್ಠಾನ ಮತ್ತು ಆದ್ಯತೆಯ ಬಗ್ಗೆ ಜನರು ಪ್ರಶ್ನೆ ಎತ್ತಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಬೀದಿ ನಾಯಿ ರಕ್ಷಣೆಗೆ ಹೊಸ ಯೋಜನೆಯ ರೂಪಿಸುವುದಾಗಿ ಘೋಷಿಸಿದ್ದರು. ಅದರಂತೆ ನಗರದಲ್ಲಿನ ಆಯ್ದ ಬೀದಿನಾಯಿಗಳಿಗೆ ಚಿಕನ್ ಬಿರಿಯಾನಿ ಊಟ ನೀಡಲಾಗುವುದು ಎಂದು ತಿಳಿಸಿದ್ದರು. ಈಗಾಗಲೇ ನಾಯಿಗಳ ಉಪಟಳ, ದಾಳಿಯಿಂದ ಬೇಸತ್ತಿರುವ ಜನರಿಗೆ ಬಿಬಿಎಂಪಿಯ ಈ ಯೋಜನೆ ಅಚ್ಚರಿ ಮತ್ತು ಆಘಾತ ತಂದಿದೆ.
ಯೋಜನೆಗೆ ಯಾರು, ಏನಂದ್ರು?: ನಾಯಿಗಳಿಗೆ ಚಿಕನ್ ಬಿರಿಯಾನಿ ನೀಡುವ ಯೋಜನೆಗೆ ನಗರದ ನಿವಾಸಿಗಳು ಮತ್ತು ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜಯನಗರ ನಿವಾಸಿ ಪ್ರಭು ಎಂಬವರು ಮಾತನಾಡಿ, “ನಾಯಿಗಳಿಗೆ ಆಹಾರ ನೀಡುವುದನ್ನು ಸ್ವಾಗತಿಸುವೆ. ಆದರೆ, ಅವುಗಳ ಸಂತಾನಹರಣ ಚಿಕಿತ್ಸೆಯನ್ನು ನಡೆಸಬೇಕು. ಇಲ್ಲವಾದಲ್ಲಿ ಯೋಜನೆ ದಿಕ್ಕು ತಪ್ಪಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಸ್ವರ್ಣಿಮಾ ನಿಶಾಂತ್ ಈ ಯೋಜನೆಯನ್ನು ಟೀಕಿಸಿ, “ಇದು ಕೇವಲ ಗಿಮಿಕ್. ಬಿಬಿಎಂಪಿ ಹಿಂದಿನಂತೆ ಪ್ರಚಾರದ ಕ್ರಮಕ್ಕೆ ಮುಂದಾಗಿದೆ. ಬೀಗಿ ನಾಯಿಗಳಿಗೆ ಬಿರಿಯಾನಿ ನೀಡುವ ಮೊದಲು ಅವುಗಳಿಗೆ ಪ್ರತ್ಯೇಕ ಆಶ್ರಯ ಮತ್ತು ರಕ್ಷಣೆ ನೀಡಬೇಕಿದೆ. ಕೋವಿಡ್ ಲಾಕ್ಡೌನ್ ವೇಳೆ ಇಂಥದ್ದೇ ಕ್ರಮ ಜರುಗಿಸಿ ಕೈಬಿಡಲಾಗಿತ್ತು” ಎಂದು ಆರೋಪಿಸಿದ್ದಾರೆ.
“ಯೋಜನೆಯ ಆದ್ಯತೆಯು ಸಮಂಜಸವಾಗಿಲ್ಲ. ಇದು ಮತ್ತೊಂದು ಯೋಜಿತ ವಂಚನೆಯಾಗಿದೆ. ಈಗಿರುವ ಯೋಜನೆಗಳನ್ನೇ ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ, ಹೊಸ ಕ್ರಮಗಳೇಕೆ” ಎಂದು ಪ್ರಶ್ನಿಸಿದ್ದಾರೆ.
ಅಪಾಯಕಾರಿ ಹೆಜ್ಜೆ-ಸಂಸದ ಮಂಜುನಾಥ್: ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಈ ಯೋಜನೆಯನ್ನು ಅಪಾಯಕಾರಿ ಎಂದು ಜರಿದಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಬೀದಿನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಂದ ದೂರ ಮಾಡಿ ಅವುಗಳಿಗೆ ಪ್ರತ್ಯೇಕ ಆಶ್ರಯ ನೀಡಬೇಕು. ಅದು ಬಿಟ್ಟು ತೆರಿಗೆದಾರರ ಹಣದಲ್ಲಿ ಚಿಕನ್ ಬಿರಿಯಾನಿ ತಿನ್ನಿಸುವುದಲ್ಲ” ಎಂದು ಟೀಕಿಸಿದ್ದಾರೆ.
Laxmi News 24×7