ಚಿತ್ತೂರ್: ಮೂಢನಂಬಿಕೆಗೆ ಮೊರೆ ಹೋದ ದಂಪತಿ ತಮ್ಮಿಬ್ಬರು ವಿದ್ಯಾವಂತ ಪುತ್ರಿಯರನ್ನು ಹೊಡೆದು ಸಾಯಿಸಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶ ಚಿತ್ತೂರ್ ಜಿಲ್ಲಿಯ ಮದನಪಲ್ಲಿ ಸಮೀಪದ ಶಿವನಗರ್ ಪ್ರದೇಶದಲ್ಲಿ ನಡೆದಿದೆ.
ಹೆತ್ತವರ ಕೈಯಿಂದಲೇ ದುರಂತ ಅಂತ್ಯ ಕಂಡ ಪುತ್ರಿಯರನ್ನು ಅಲೇಖ್ಯಾ(27) ಮತ್ತು ಸಾಯಿ ದಿವ್ಯಾ ಎಂದು ಗುರುತಿಸಲಾಗಿದೆ.
ಆರೋಪಿ ದಂಪತಿ ಪುರುಷೋತಮ್ಮ ನಾಯ್ಡು, ಪದ್ಮಜಾ ಎಂದು ಗುರುತಿಸಲಾಗಿದೆ. ಪದ್ಮಜಾ ಖಾಸಗಿ ಶಾಲೆಯ ಸಂಚಾಲಕಿಯಾದ್ರೆ ಪುರುಷೋತ್ತಮ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ.
ಅಲೇಖ್ಯಾ ಭೂಪಾಲದಲ್ಲಿ ಸ್ನಾತ್ತಕೋತ್ತರ ಪದವಿ ಪೂರೈಸಿದರೆ, ಸಾಯಿ ದಿವ್ಯಾ ಎ.ಆರ್ ರಹೆಮಾನ್ ಅವರ ಮ್ಯೂಸಿಕ್ ಸ್ಕೂಲ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಬ್ಬರು ಮನೆಗೆ ವಾಪಸ್ ಆಗಿ ಇಲ್ಲಿಯೇ ಉಳಿದುಕೊಂಡಿದ್ದರು.
ಕುಟುಂಬ ಸದಸ್ಯರು ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದ್ದು, ವಿಚಿತ್ರ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ದಂಪತಿ ಮನೆಯೊಳಗೆ ಪ್ರವೇಶಕ್ಕೆ ನಿರಾಕರಿಸಿದ್ದರು. ಆದ್ರೆ ಪಟ್ಟು ಬಿಡದ ಪೊಲೀಸರು ಮನೆಯೊಳಗೆ ಹೋಗಿ ನೋಡಿದಾಗ ದೇವರ ಕೋಣೆ ಮತ್ತು ಮತ್ತೊಂದು ಕೊಠಡಿಯಲ್ಲಿ ಶವಗಳು ದೊರೆತಿವೆ.
ಇಂದು ರಾತ್ರಿ ಕಾಳಿಯುಗ ಕೊನೆಯಾಗಲಿದೆ ಇಬ್ಬರು ಪುತ್ರಿಯರನ್ನು ಬಲಿ ನೀಡುವಂತೆ ದೈವೀ ಸಂದೇಶ ಬಂದಿತ್ತು. ನಾಳೆ ಸತ್ಯಯುಗ ಆರಂಭವಾಗಲಿದೆ ತಮ್ಮ ಪುತ್ರಿಯರು ಮತ್ತೆ ಜೀವಂತವಾಗಲಿದ್ದಾರೆ ಎಂದು ದಂಪತಿ ಪೊಲೀಸರೆದುರು ಹೇಳಿಕೊಂಡಿದ್ದಾರೆ.
ಡೆಂಬಲ್ ಸಹಾಯದಿಂದ ತಮ್ಮಿಬ್ಬರು ಪುತ್ರಿಯನ್ನು ಈ ದಂಪತಿ ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.