ಹಾಸನ: ಜಿಲ್ಲಾಧಿಕಾರಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೊ ಗೊತ್ತಿಲ್ಲ. ನನ್ನ ಮೂವತ್ತು ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೆಂಡಾಮಂಡಲರಾಗಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಶಾಸಕರಾದ ಎ.ಮಂಜು, ಹೆಚ್.ಪಿ.ಸ್ವರೂಪ್ಪ್ರಕಾಶ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು ಡಿಸಿ ವಿರುದ್ಧ ಹರಿಹಾಯ್ದರು. ಅದು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಈ ಡಿಸಿನಾ? ನಮ್ಮ ಮತದಾರರು ಹೆಚ್ಚು ಇರುವ ಕಡೆ ಗ್ರಾ.ಪಂ.ಚುನಾವಣೆಗೆ ಮೀಸಲಾತಿ ಬದಲಾಯಿಸಿದ್ದಾರೆ. ತಹಶೀಲ್ದಾರ್ ಕಳುಹಿಸಿರುವುದನ್ನು ಬದಲಾಯಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸತತವಾಗಿ ಈ ರೀತಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವೆಲ್ಲಾ ನಡಿತಿರೋದು. ಈ ಜಿಲ್ಲಾಧಿಕಾರಿ ಡ್ರಾಮ ಮಾಸ್ಟರ್ ಇದ್ದಂಗೆ. ಎಲ್ಲೂ ಹೊರಗಡೆ ಹೋಗಲ್ಲ, ಬರೀ ಸಭೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಯಾವ ಆಧಾರದ ಮೇಲೆ ಡಿಸಿ ಮೀಸಲಾತಿ ಬದಲಾಯಿಸಿದರು? ಕರಡು ಪ್ರತಿ ಹಾಕಬೇಕಿತ್ತು. ಕೇಂದ್ರದ ಎಲೆಕ್ಷನ್ ಕಮಿಷನರ್ ಅವರನ್ನು ಬಿಜೆಪಿ ಏಜೆಂಟ್ ಅಂತಾರೆ. ಬರುವ ಸೋಮವಾರ ಮಾಜಿ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಾರೆ. ಆ ನಂತರ ಒಂದು ವಾರ ಗಡುವು ಕೊಡುತ್ತೇವೆ. ಮೀಸಲಾತಿ ಪಟ್ಟಿ ಸರಿಪಡಿಸಬೇಕು. ಇಲ್ಲವಾದಲ್ಲಿ ನಾಲ್ಕು ಜನ ಜೆಡಿಎಸ್ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಏನಾದರೂ ಘಟನೆ ಆದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.
Laxmi News 24×7