ಬೆಳಗಾವಿ: ಮದ್ಯಪಾನ ವಿಪರೀತ ಸೇವನೆಯಿಂದ ಮನುಷ್ಯನ ಯಕೃತ್ (ಲಿವರ್) ತೊಂದರೆ ಜೊತೆಗೆ ಜಾಂಡೀಸ್ ಖಾಯಿಲೆಗೆ ತುತ್ತಾಗಲಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆಗೆ ಒದಗಿಸುವ ಉದ್ದೇಶದಿಂದ ಅಬಕಾರಿ ಇಲಾಖೆಗೆ ಬರುವ ಆದಾಯದಲ್ಲಿ ಶೇ.20ರಷ್ಟು ಹಣವನ್ನು ಮೀಸಲಿಡಬೇಕು ಎಂದು ವಿಧಾನಪರಿಷತ್ನಲ್ಲಿ ವಿರೋಧ ಪಕ್ಷ ಒತ್ತಾಯಿಸಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮೇಲ್ಮನೆ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಸಿ.ಟಿ.ರವಿ, ಶಿವಕುಮಾರ್, ರಮೇಶ್ ಬಾಬು, ಭಾರತಿ ಶೆಟ್ಟಿ. ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇನ್ನಿತರರು ನಿಯಮ 330ರ ಅಡಿ ಮಾತನಾಡಿದರು.
ಮೊದಲಿಗೆ ರವಿಕುಮಾರ್ ಮಾತನಾಡಿ, ಮದ್ಯಸೇವನೆಯಿಂದ ಶೇ.3ರಷ್ಟು ಜನರು ರೋಗಕ್ಕೆ ತುತ್ತಾಗುತ್ತಿದ್ಧಾರೆ. ವರ್ಷಕ್ಕೆ 43 ಸಾವಿರ ಕೋಟಿ ಆದಾಯಕ್ಕೆ ಸರ್ಕಾರ ಗುರಿ ಇಟ್ಟುಕೊಂಡಿದೆ. ಆದರೂ ಶೇ.20ರಷ್ಟು ಆದಾಯ ಕಡಿಮೆಯಾಗಿದೆ. ಮದ್ಯಸೇವನೆಯಿಂದ ಜಾಂಡಿಸ್, ಯಕೃತ್ಗೆ ತೊಂದರೆಯಾಗಿ ಚಿಕಿತ್ಸೆಗೆ ಹೆಚ್ಚು ಖರ್ಚಾಗುತ್ತಿದೆ. ಹೀಗಾಗಿ ಅಬಕಾರಿ ಇಲಾಖೆಗೆ ಬರುವ ಆದಾಯದಲ್ಲಿ ಶೇ.20ರಷ್ಟು ಮದ್ಯಪ್ರಿಯರ ಅನಾರೋಗ್ಯ ಚಿಕಿತ್ಸೆಗೆ ಹಣ ಮೀಸಲಿಡಿ ಎಂದು ಒತ್ತಾಯಿಸಿದರು.
ಜಾಂಡಿಸ್ನಿಂದ ಮದ್ಯಪ್ರಿಯರು ಬೇಗ ಸಾಯುತ್ತಿದ್ದಾರೆ. ರೋಗದ ಚಿಕಿತ್ಸೆಗೆ ಸರ್ಕಾರ ಹಣ ನೀಡಿದರೆ ಹೆಚ್ಚು ಕುಡಿಯಲೂಬಹುದು. ಹೆಚ್ಚು ಆದಾಯ ಪಡೆಯಬಹುದು. ಮದ್ಯಸೇವನೆಯಿಂದ ಶೇ.3ರಷ್ಟು ಅಂದರೆ ದೇಶದಲ್ಲಿ 15 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಐವರಲ್ಲಿ ಓರ್ವ ಮದ್ಯಸೇವನೆ ಮಾಡಿ ಜಾಂಡಿಸ್ ಖಾಯಿಲೆಯಿಂದ ಮರಣ ಹೊಂದುತ್ತಿದ್ಧಾರೆ. ಪಂಚ ಗ್ಯಾರಂಟಿ ಯೋಜನೆಗಳು ನಡೆಯುತ್ತಿರುವುದರಿಂದ ಮದ್ಯಪ್ರಿಯರಿಂದ ಯೋಗದಾನ ಹೆಚ್ಚಿದೆ. ಆದಾಯದಲ್ಲಿ ರೋಗದ ಚಿಕಿತ್ಸೆಗೆ ಶೇ. 20ರಷ್ಟು ಮೀಸಲಿಡಿ ಎಂದು ಒತ್ತಾಯಿಸಿದರು.
Laxmi News 24×7