ಕಲಬುರಗಿ: ಜಿಲ್ಲೆಯಾದ್ಯಂತ ಕಳೆದರೆಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಹಲವಡೆ ಮನೆಗಳ ಗೋಡೆ ಕುಸಿದಿದ್ದು, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋದ ಘಟನೆಗಳು ಸಂಭವಿಸಿವೆ.
ಕಮಲಾಪುರ ತಾಲೂಕಿನ ಕುದಮೂಡ ಗ್ರಾಮದ ಸೇತುವೆ ಮೇಲೆ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಜಮೀನುಗಳಿಗೆ ಕರೆದೊಯ್ಯುವಾಗ ಘಟನೆ ನಡೆದಿದೆ. ತಮ್ಮ ಕಣ್ಣೆದುರಲ್ಲೇ ತಾವು ಸಾಕಿ, ಸಲುಹಿದ ಜಾನುವಾರುಗಳು ಕೊಚ್ಚಿಕೊಂಡು ಹೋಗುತ್ತಿರುವಾಗ ಕಾಪಾಡಲು ಸಾಧ್ಯವಾಗದೆ ರೈತರು ಅಸಹಾಯಕರಾಗಿದ್ದರು. ಜಾನುವಾರುಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.
ಮಳೆಗೆ ಕುಸಿದ ಮನೆ ಗೋಡೆ : ಎಡಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿತ್ತಾಪುರ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತಾಲೂಕಿನ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದು, ಅಪಾರ ಹಾನಿ ಉಂಟಾಗಿದೆ. ರಸೂಲ್ ಸಾಬ್ ಡೋಂಗಾ ಅವರಿಗೆ ಸೇರಿದ ಮನೆಯ ಮೂರು ಕೋಣೆಯ ಗೋಡೆ ಹಾಗೂ ಪುಥಲಿ ಬೇಗಂ ಡೋಂಗಾ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮುಲ್ಲಾಮಾರಿ ಜಲಾಶಯದಿಂದ 1200 ಕ್ಯೂಸೆಕ್ ನೀರು ಬಿಡುಗಡೆ : ಚಿಂಚೋಳಿ ತಾಲೂಕಿನಲ್ಲಿ ವರುಣ ಅಬ್ಬರಿಸಿದ್ದಾನೆ. ಕರ್ನಾಟಕ-ತೆಲಂಗಾಣದ ಗಡಿ ಗ್ರಾಮವಾಗಿರುವ ಹಲಕೋಡ ಗ್ರಾಮದಲ್ಲಿ ನಿರಂತರವಾಗಿ ಮಳೆ ಆಗುತ್ತಿದ್ದು, ಮುಲ್ಲಾಮಾರಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ, ನದಿಗೆ ನೀರು ಬಿಡಲಾಗುತ್ತಿದೆ. ಮುಲ್ಲಾಮಾರಿ ಜಲಾಶಯದಿಂದ ಕಾಗಿಣಾ ನದಿಗೆ 1,200 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಹಲಕೋಡ ಗ್ರಾಮದ ಬಳಿ ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜನರಿಗೆ ಎಚ್ಚರಿಕೆಯಿಂದ ಇರಲು ಆಡಳಿತ ಸೂಚನೆ ನೀಡಿದೆ.
Laxmi News 24×7