ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಚಿಕಿತ್ಸೆ ನೀಡಬೇಕಾದರೆ, ವೆಂಟಿಲೇಟರ್ಗಳ ಅಗತ್ಯವಿದೆ. ಆದರೆ, ಸದ್ಯ ವೆಂಟಿಲೇಟರ್ಗಳ ಸಂಖ್ಯೆ ಕಡಿಮೆ ಇರುವುದು ಇರುವುದು ತಲೆನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶದಲ್ಲಿರುವ ಎಲ್ಲಾ ಆಟೋ ಮೇಕರ್ಸ್ ಕಂಪನಿಗಳಿಗೆ ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ಹೆಚ್ಚು ವೆಂಟಿಲೇಟರ್ಗಳ ತಯಾರಿಕೆಗೆ ಮುಂದಾಗುವಂತೆ ಕೇಳಿಕೊಂಡಿದೆ.
ಈಗಾಗಲೇ ಆನಂದ್ ಮಹಿಂದ್ರಾ ಮಾಲೀಕತ್ವದ ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿ ಬೆಂಗಳೂರು ಮೂಲದ ವೆಂಟಿಲೇಟರ್ ರಫ್ತು ಮಾಡುವ ಕಂಪನಿ ಸ್ಕನ್ರೇ ಟೆಕ್ನಾಲಜಿ ಜೊತೆಗೂಡಿ ವೆಂಟಿಲೇಟರ್ ತಯಾರಿಕೆಗೆ ಮುಂದಾಗಿದೆ.
ಇತ್ತ ಟಾಟಾ ಗ್ರೂಪ್ ಮೈಸೂರು ಮೂಲದ ಕಂಪನಿಯೊಂದಿಗೆ ವೆಂಟಿಲೇಟರ್ ತಯಾರಿಕೆಗೆ ಕೊನೆ ಹಂತದ ಮಾತುಕತೆಯನ್ನು ನಡೆಸುತ್ತಿದೆ.ಮೂಲಗಳ ಪ್ರಕಾರ ದೇಶದ ಪ್ರಮುಖ ನಾಲ್ಕು ಕಂಪನಿಗಳಾದ ಮಾರುತಿ ಸುಜುಕಿ, ಎಂ ಅಂಡ್ ಎಂ, ಟಾಟಾ ಮೋಟರ್ಸ್ ಹಾಗೂ ಹುಂಡೈ ಕಂಪನಿಗಳ ಜೊತೆ ಜಂಟಿ ಸಭೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
ವೆಂಟಿಲೇಟರ್ ನಿರ್ಮಾಣಕ್ಕೆ ಬೇಕಾದ ಅಗತ್ಯ ಪೂರೈಕೆಗಳನ್ನು ಹೆಚ್ಚಿಸಿ, ಹೆಚ್ಚು ಮಾನವ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಹೆಚ್ಚು ವೆಂಟಿಲೇಟರ್ ನಿರ್ಮಾಣಕ್ಕೆ ಸಜ್ಜಾಗಿ ಎಂದು ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯ ಕೇಳಿಕೊಂಡಿದೆ ಎನ್ನಲಾಗಿದೆ.
ಅಮೆರಿಕಾದಲ್ಲಿ ಈಗಾಗಲೇ ಫೋರ್ಡ್ ಮೋಟರ್ಸ್ 3ಎಂ ಸಂಸ್ಥೆಯ ಜೊತೆಗೂಡಿಕೊಂಡು ವೆಂಟಿಲೇಟರ್ ನಿರ್ಮಾಣಕ್ಕೆ ಮುಂದಾಗಿದೆ. ಅದೇ ಮಾದರಿಯಲ್ಲಿ ವೆಂಟಿಲೇಟರ್ ನಿರ್ಮಾಣಕ್ಕಾಗಿ ಸರ್ಕಾರ ಕಳೆದ 48 ಗಂಟೆಗಳಲ್ಲಿ ಹೆಚ್ಚು ಒತ್ತು ಕೊಟ್ಟಿದೆ. ಒಂದು ಮೂಲಗಳ ಪ್ರಕಾರ ಮುಂದಿನ ಮೇ ವೇಳೆ ಭಾರತಕ್ಕೆ 1,10,000 ರಿಂದ 2,20,000 ವೆಂಟಿಲೇಟರ್ಗಳ ಅವಶ್ಯಕತೆ ಬೀಳಬಹುದು ಎಂದು ಹೇಳಲಾಗುತ್ತಿದೆ.
ಸರ್ಕಾರ ಸರಿಯಾದ ಸಮಯಕ್ಕೆ ವೆಂಟಿಲೇಟರ್ ಪೂರೈಕೆಗಾಗಿ ವಾರ್ ರೂಮ್ನಲ್ಲಿ ಕಾರ್ಯನಿರ್ವಹಿಸುವ ವೇಗದಲ್ಲಿ ಕ್ರಮಕೈಗೊಳ್ಳುತ್ತಿದೆ ಅಲ್ಲದೇ ಇಬ್ಬರು ಜಂಟಿ ಕಾರ್ಯದರ್ಶಿಗಳು ವಾಟ್ಸ್ ಗ್ರೂಪ್ ಮೂಲಕ ವೆಂಟಿಲೇಟರ್ ತಯಾರಿಕಾ ಸಂಸ್ಥೆಗಳೊಂದಿಗೆ ನೇರ ಸಂಪರ್ಕದಲ್ಲಿದ್ದು. ಶೀಘ್ರ ವೆಂಟಿಲೇಟರ್ ನಿರ್ಮಾಣಕ್ಕೆ ಇರುವ ಅಡಚಣೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಲ್ಲದೇ ಸರ್ಕಾರ ಹಾಗೂ ಕೈಗಾರಿಕೋದ್ಯಮಿಗಳು ಸತತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸುತ್ತಿದ್ದಾರೆ.ಕಾರ್ ಕಂಪನಿಗಳು ಹಾಗೂ ವೈದ್ಯಕೀಯ ಸಲಕರಣೆಗಳ ತಯಾರಿಕರ ನಡುವೆ ಪರಿಣಾಮಕಾರಿ ಒಪ್ಪಂದಗಳಾಗುವುದು ಕಷ್ಟ. ಅದು ಇಷ್ಟು ಅಲ್ಪಾವಧಿಯಲ್ಲಿ ದೊಡ್ಡ ಪ್ರಮಾಣದ ವೆಂಟಲೇಟರ್ ತಯಾರಿಸುವುದು ಇನ್ನೂ ದೊಡ್ಡ ಸವಾಲು.
ಸರ್ಕಾರ ಬೃಹತ್ ಸಂಖ್ಯೆಯಲ್ಲಿ ವೆಂಟಿಲೇಟರ್ ತಯಾರಿಸಲು ಹೇಳಿದೆ. ನಮ್ಮ ತಂಡಗಳು ಇದರ ಸಾಧ್ಯತೆಗಳ ಬಗ್ಗೆ ಈಗಾಗಲೇ ಅಧ್ಯಯನ ನಡೆಸಿವೆ ಇನ್ನೂ ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು
ಮಾರುತಿ ಸುಜುಕಿ ಅಧ್ಯಕ್ಷ ಆರ್ ಸಿ ಬಾರ್ಗವ್ ಹೇಳಿದ್ದಾರೆ.