ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!
* ಖಾನಾಪುರ ರಸ್ತೆ ಕಾಮಗಾರಿಗೆ ವೇಗ ನೀಡಲು ಶಾಸಕರ ಮನವಿ
* ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ವಿಠ್ಠಲ ಹಲಗೇಕರ
* ರೈತರಿಗೆ ತಕ್ಷಣವೇ ಪರಿಹಾರ ನೀಡಲು ಶಾಸಕರ ಆಗ್ರಹ
* ಮೀನು ಮಾರುಕಟ್ಟೆ ರಸ್ತೆ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ
ಖಾನಾಪುರ ಪಟ್ಟಣದ ಪ್ರಮುಖ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರೋದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸ್ಥಗಿತಗೊಂಡಿರೋ ಮೀನು ಮಾರುಕಟ್ಟೆ ರಸ್ತೆ ಕೆಲಸಕ್ಕೆ ವೇಗ ನೀಡಲು ಮತ್ತು ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸಲು ಶಾಸಕ ವಿಠ್ಠಲ ಹಲಗೇಕರ ಅವರು ನೇರವಾಗಿ ಉಸ್ತುವಾರಿ ಸಚಿವರ ಅಂಗಳಕ್ಕೆ ತಲುಪಿದ್ದಾರೆ.
ಖಾನಾಪುರದ ಮೀನು ಮಾರುಕಟ್ಟೆ ರಸ್ತೆ ಕಾಮಗಾರಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಶಾಸಕ ವಿಠ್ಠಲ ಹಲಗೇಕರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ರಸ್ತೆಗಾಗಿ ಭೂಮಿ ನೀಡಿದ ರೈತರಿಗೆ ಕೂಡಲೇ ಕಾನೂನುಬದ್ಧ ಪರಿಹಾರ ಒದಗಿಸಬೇಕು ಮತ್ತು ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕರು ಸಚಿವರಿಗೆ ಮನವಿ ಮಾಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸುವಂತೆ ಆಗ್ರಹಿಸಿದ ಈ ಸಂದರ್ಭದಲ್ಲಿ ಬಿಜೆಪಿ ನಾಯಕ ಪ್ರಮೋದ್ ಕೊಚೇರಿ ಹಾಗೂ ರೈತ ಪ್ರತಿನಿಧಿ ರಾಹುಲ್ ಸಾವಂತ್ ಉಪಸ್ಥಿತರಿದ್ದರು.
Laxmi News 24×7