ಬೆಳಗಾವಿ: ದಕ್ಷಿಣ ಕೊಂಕಣ ಎಜುಕೇಶನ್ ಸೊಸೈಟಿ ವತಿಯಿಂದ, ಲೋಕಮಾನ್ಯ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿಯ ಸಹಯೋಗದಲ್ಲಿ ಮಾವು, ಅರಣ್ಯೋತ್ಪನ್ನ ಮತ್ತು ಪಾರಂಪರಿಕ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಮೇ 15ರಿಂದ 17ರವರೆಗೆ ಬೆಳಗಾವಿಯ ಜಿಎಸ್ಎಸ್/ಆರ್ಪಿಡಿ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಸ್ಥಳೀಯ ಮಾವಿನ ಹಣ್ಣುಗಳ ವಿವಿಧ ತಳಿಗಳು, ಅರಣ್ಯದಲ್ಲಿ ದೊರೆಯುವ ಋತುಮಾನಿಕ ಹಣ್ಣುಗಳು, ಸಸ್ಯಗಳು, ಬೇರು-ಗಡ್ಡೆಗಳು, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯ ಮಹತ್ವವನ್ನು ಜನರಿಗೆ ಪರಿಚಯಿಸುವುದು ಈ ಉತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ದಕ್ಷಿಣ ಕೊಂಕಣ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಎಸ್.ವೈ.ಪ್ರಭು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರದರ್ಶನದಲ್ಲಿ ಮಾವು ಮತ್ತು ಅರಣ್ಯ ಉತ್ಪನ್ನಗಳ ಮಳಿಗೆಗಳು, ಸ್ಥಳೀಯ ಆಹಾರ ಮತ್ತು ಪಾನೀಯಗಳ ಸ್ಟಾಲ್ಗಳು, ವಿದ್ಯಾರ್ಥಿಗಳಿಂದ ಶಿಕ್ಷಣಾತ್ಮಕ ಪ್ರದರ್ಶನಗಳು, ಮಾಹಿತಿ ಪತ್ರಗಳು, ಮುಕ್ತ ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಮಣ್ಣಿನ ಕಲಾಕೃತಿಗಳು, ಕೈಗಾರಿಕಾ ಉತ್ಪನ್ನಗಳು ಮತ್ತು ಗ್ರಾಮೀಣ ಪರಂಪರೆಯ ವಸ್ತುಗಳಿಗೂ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಒಟ್ಟೂ 15 ಮಳಿಗೆಗಳನ್ನು ಹಾಕಲಾಗಿದೆ.
ಮೇ 15ರಂದು ಸಂಜೆ 5 ಗಂಟೆಗೆ ವೆಂಗುರ್ಲಾದ ಡಾ. ವೈಭವ ಶಿಂಧೆ ಅವರು “Exploring the World of Mangoes” ವಿಷಯವಾಗಿ ಉಪನ್ಯಾಸ ನೀಡಲಿದ್ದು, ನಂತರ ಜನಪದ ನೃತ್ಯ ‘ಸಮೈ ಡಾನ್ಸ್’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೇ 16ರಂದು ಸಂಜೆ “The Honey Story” ವಿಷಯವಾಗಿ ಜ್ಯೋತ್ಸ್ನಾ ದೇಸಾಯಿ ಅವರ ಉಪನ್ಯಾಸ ಹಾಗೂ ಸಾಂಸ್ಕೃತಿಕ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೇ 17ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪ್ರೊ. ಎಸ್. ವೈ. ಪ್ರಭು ಅವರು “Hidden Truth About Mango” ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದು, ಬಳಿಕ ಸಮಾರೋಪ ಸಮಾರಂಭ ಜರುಗಲಿದೆ.
ಈ ಮಹೋತ್ಸವವು ರೈತರು, ಹಣ್ಣು ವ್ಯಾಪಾರಿಗಳು, ಆಹಾರ ಉದ್ಯಮಿಗಳು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರನ್ನು ಒಂದೇ ವೇದಿಕೆಗೆ ತರಲು ನೆರವಾಗಲಿದೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದು, ಪರಂಪರೆಯ ಜೀವನೋಪಾಯ ಉಳಿಸುವುದು ಹಾಗೂ ಯುವಪೀಳಿಗೆಯನ್ನು ಪ್ರಕೃತಿ ಮತ್ತು ಪ್ರಾದೇಶಿಕ ಆಹಾರ ಸಂಸ್ಕೃತಿಯೊಂದಿಗೆ ಮರುಸಂಪರ್ಕಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಭು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮನಿಷಾ ಸುಬೇದಾರ, ರಾಜು ನಾಯ್ಕ ಹಾಗೂ ರಾಹುಲ್ ಖಾಲೋಲ್ಕರ್ ಇದ್ದರು.
ಹೆಚ್ಚಿನ ಮಾಹಿತಿಗಾಗಿ, ರಾಹುಲ್ ಖಾನೋಲ್ಕರ್ (9986689985), ನಮಿತಾ ಸಮಾತ್ (9481562527), ಭಾರತಿ ಸಾವಂತ್ (9449624144) ಹಾಗೂ ಪ್ರವೀಣ ಪಾಟೀಲ್ (9482543803) ಅವರನ್ನು ಸಂಪರ್ಕಿಸಬಹುದಾಗಿದೆ.
Laxmi News 24×7