ತುಮಕೂರು: ಇನ್ಮುಂದೆ ನಾನು ಲೋಕಸಭೆಗೂ ನಿಲ್ಲಲ್ಲ, ವಿಧಾನಸಭೆಗೂ ನಿಲ್ಲಲ್ಲ. ಈಗ ಚುನಾವಣೆ ಎದುರಿಸಲು ಟನ್ ಗಟ್ಟಲೆ ಹಣ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ದಿವಂಗತ ಮಾಜಿ ಸಚಿವ ವೀರಣ್ಣನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಉಗ್ರಪ್ಪನವರು ಕಾಲ್ ಮಾಡಿ ಹೇಳಿದ್ರು. ತುಮಕೂರಿನಲ್ಲಿ ಒಂದು ನುಡಿನಮನ ಕಾರ್ಯಕ್ರಮ ಮಾಡ್ತೀವಿ. ನೀವು ಬರಲೇಬೇಕು ಅಂದ್ರು. ನಾನು ವೀರಣ್ಣನವರು ಕಾಲವಾದ ದಿನ ಕೆ.ಆರ್. ಪೇಟೆಗೆ ಹೋಗಿದ್ದೆ. ಹಾಗಾಗಿ, ಅವತ್ತು ಬರುವುದಕ್ಕೆ ಆಗಲಿಲ್ಲ. ಆಸ್ಪತ್ರೆ ಸೇರಿದಾಗ ಉಗ್ರಪ್ಪ ಕಾಲ್ ಮಾಡಿದ್ರು. ಆಗ ಆಸ್ಪತ್ರೆಗೆ ಹೋದೆ. ಅವರನ್ನು ನೋಡಿ ಬಹಳ ವ್ಯಥೆ ಆಯಿತು. ಉಗ್ರಪ್ಪನವರನ್ನು ಕೇಳಿದೆ, ಹೇಗಿದ್ದಾರೆ ಅಂತಾ. ಸ್ವಲ್ಪ ಹುಷಾರಾಗಿದ್ದಾರೆ ಅಂದ್ರು. ಸ್ವಲ್ಪ ದಿನದಲ್ಲೇ ಅವರ ಸಾವಾಯಿತು. ಅವರಿಗೆ 88 ವರ್ಷ ಆಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ನನಗೆ ಈಗ 80 ವರ್ಷ, ನಾನು ಆರೋಗ್ಯವಾಗಿದ್ದೇನೆ. ಎಷ್ಟು ವರ್ಷ ಬದುಕಿರುತ್ತೇನೆ ಅಂತಾ ಗೊತ್ತಿಲ್ಲ. ನಾನು ಮುಂದಿನ ಚುನಾವಣೆಗೆ ನಿಲ್ಲಬಾರದು ಅಂತಾ ಅಂದುಕೊಂಡಿದ್ದೇನೆ. ಕಾರಣ ವಯಸ್ಸು ಆಯಿತು ಅಂತಾ ಅಲ್ಲ. ಚುನಾವಣಾ ವ್ಯವಸ್ಥೆ ಬಹಳ ದುಬಾರಿಯಾಗಿದೆ ಅಂತಾ. ಚುನಾವಣೆ ವ್ಯವಸ್ಥೆ ಸುಧಾರಣೆ ಮಾಡದೇ ಹೋದರೆ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಇರೋದಕ್ಕೆ ಸಾಧ್ಯವಿಲ್ಲ. ಇನ್ಮುಂದೆ ಲೋಕಸಭೆಗೂ ನಿಲ್ಲೊಲ್ಲ, ವಿಧಾನಸಭೆಗೂ ನಿಲ್ಲೊಲ್ಲ. ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ಈಗ ಚುನಾವಣೆ ಎದುರಿಸಲು ಟನ್ ಗಟ್ಟಲೆ ಹಣ ಬೇಕು ಎಂದರು.
ನನಗೆ ಸಂಸತ್ಗೆ ಹೋಗಬೇಕು ಅಂತಾ ಆಫರ್ ಬಂದಿತ್ತು. ರಿಜೆಕ್ಟ್ ಮಾಡಿದೆ. 1991ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ನಿಂತಿದ್ದೆ. 10 ಸಾವಿರ ಮತಗಳಿಂದ ಸೋತಿದ್ದೆ. ಆಗ ಹೆಗಡೆ ಅವರು ಕೂಡ ಸೋತರು. ಅವತ್ತೆ ತೀರ್ಮಾನ ಮಾಡ್ದೆ. ಇನ್ನು ಯಾವತ್ತೂ ಲೋಕಸಭೆಗೆ ನಿಲ್ಲಬಾರದು ಅಂತಾ ಎಂದು ತಿಳಿಸಿದರು.
ಸೋಷಿಯಲ್ ಮೀಡಿಯಾ ಮುಖಾಂತರ ಪ್ರಚಾರ ನಡೀಲಿ. ಹಳ್ಳಿಗಳಿಗೆ ಹೋಗೋದು ಬೇಡ. ಅಪರಾಧ ಅಂತಾ ತೀರ್ಮಾನಿಸಬೇಕು. ಚುನಾವಣಾ ಆಯೋಗದವರು ಹೇಳಿದಷ್ಟು ಹಣ ಮಾತ್ರ ಖರ್ಚು ಮಾಡಬೇಕು. 1983ಕ್ಕೂ 2023ರ ಚುನಾವಣಾಗೂ ಬಹಳಷ್ಟು ವ್ಯತ್ಯಾಸ. ಚುನಾವಣೆಯಲ್ಲಿ ಅಕ್ರಮವಾಗಿ ಹಣ ಖರ್ಚು ಮಾಡದಂತೆ, ಇದಕ್ಕೆ ಹೋರಾಟ ಮಾಡಬೇಕು. ಜನರು ಕೂಡ ಸಹಕಾರ ಮಾಡಬೇಕು.
Laxmi News 24×7