ಚಿಕ್ಕಮಗಳೂರು: ಕಳೆದ ಎರಡು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಗದಗ ಜಿಲ್ಲೆಯಿಂದ ಮಡಿಕೇರಿಯ ಕುಶಾಲನಗರಕ್ಕೆ ಬಂದಿದ್ದ ಕಾರ್ಮಿಕರು ಕೆಲಸ ಇಲ್ಲವೆಂದು ಗೂಡ್ಸ್ ವಾಹನದಲ್ಲಿ ಗದಗಕ್ಕೆ ತೆರಳುತ್ತಿದ್ದರು. ಈ ವೇಳೆ ಚಿಕ್ಕಮಗಳೂರು ನಗರ ಪೊಲೀಸರು ರಕ್ಷಿಸಿ ನಗರದ ನರಿಗುಡ್ಡನಹಳ್ಳಿ ಸರ್ಕಲ್ನಲ್ಲಿರುವ ಬಿಸಿಎಂ ಹಾಸ್ಟೆಲ್ಲಿನ ಕ್ವಾರಂಟೈನ್ಗೆ ದಾಖಲಿಸಿದ್ದಾರೆ.
ಹಾಸನ ಮಾರ್ಗದಿಂದ ಬಂದ ವಾಹನವನ್ನು ಹಿರೇಮಗಳೂರು ಚೆಕ್ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸರು ಚೆಕ್ ಮಾಡಿದ್ದು, ಗಾಡಿಯಲ್ಲಿ ಆರು ಜನ ಇದ್ದರು. ಎಲ್ಲರೂ ಗದಗ ಜಿಲ್ಲೆಯವರಾಗಿದ್ದು, ತಮ್ಮ ಊರಿಗೆ ತೆರಳುತ್ತಿದ್ದರು. ಎಲ್ಲರನ್ನೂ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ. ಗದಗದಿಂದ ಬಂದಿದ್ದ ಇವರು, ಎಲ್ಲಿ ಕೆಲಸ ಸಿಗುತ್ತದೆಯೋ ಅಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ಕಳೆದ 26 ದಿನಗಳಿಂದ ಕೊರೊನಾ ಆತಂಕದಿಂದ ದೇಶವೇ ಲಾಕ್ಡೌನ್ ಆದ ಹಿನ್ನೆಲೆ ಎಲ್ಲೂ ಕೆಲಸ ಸಿಗದ್ದಕ್ಕೆ ಊರಿಗೆ ಮರಳುತ್ತಿದ್ದರು.
ಒಂದು ಕಡೆ ಕೆಲಸವಿಲ್ಲ, ಇನ್ನೊಂದೆಡೆ ದುಡಿದ ಹಣವೆಲ್ಲವೂ ಕರ್ಚಾದ ಹಿನ್ನೆಲೆ ಊರಿಗೆ ಹೊರಟಿದ್ದರು. ಕುಶಾಲನಗರದ ಬಸ್ ನಿಲ್ದಾಣದ ಬಳಿ ಬಂದಾಗ, ಅಲ್ಲಿಗೆ ಬಂದ ಗೂಡ್ಸ್ ವಾಹನದ ಚಾಲಕ ಚಿಕ್ಕಮಗಳೂರಿಗೆ ಹೋಗುತ್ತಿದ್ದೇನೆ, ಅಲ್ಲಿಂದ ಬೇರೆ ಗಾಡಿಯಲ್ಲಿ ನಿಮ್ಮೂರಿಗೆ ಹೋಗುವಿರಂತೆ ಎಂದು ಹೇಳಿ ಒಬ್ಬೊಬ್ಬರಿಂದ ತಲಾ 100 ರೂಪಾಯಿಗೆ ಮಾತನಾಡಿಕೊಂಡು ಕರೆದುಕೊಂಡು ಬಂದಿದ್ದ. ಇದೀಗ ವಾಹನದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದು, ಲಾರಿ ಹಾಗೂ ಚಾಲಕನನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.