ಬೆಳಗಾವಿ : ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ಬೆಳಗಾವಿಯ ಕನ್ನಡ ಭವನವನ್ನು ಖಾಸಗಿ ಸಂಘಕ್ಕೆ ಹಸ್ತಾಂತರಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರಿಗೆ ರಾಜ್ಯ ಕಸಾಪ ನೋಟೀಸ್ ಜಾರಿ ಮಾಡಿದೆ.
ಬೆಳಗಾವಿಯ ಒಂಬತ್ತು ಕನ್ನಡಪರ ಸಂಘಟನೆಗಳು ನೀಡಿದ ದೂರಿನ ಮೇರೆಗೆ ರಾಜ್ಯ ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಸುಮಾರು ₹5 ಕೋಟಿ ವೆಚ್ಚದ ಈ ಭವನವನ್ನು ನಿಯಮಬಾಹಿರವಾಗಿ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಟ್ಟಿರುವುದರಿಂದ ಪರಿಷತ್ತಿಗೆ ತಿಂಗಳಿಗೆ ಅಂದಾಜು ₹2 ಲಕ್ಷ ಬಾಡಿಗೆ ಆದಾಯ ನಷ್ಟವಾಗುತ್ತಿದೆ ಎಂದು ನೋಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ನಡೆಸಿರುವ ಹಿನ್ನೆಲೆಯಲ್ಲಿ, “ನಿಮ್ಮ ವಿರುದ್ಧ ಯಾಕೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು?” ಎಂದು ಪ್ರಶ್ನಿಸಲಾಗಿದೆ. ಈ ಕುರಿತು ಏಳು ದಿನಗಳ ಒಳಗಾಗಿ ಸೂಕ್ತ ಸಮರ್ಥನೆ ನೀಡದಿದ್ದರೆ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ರಾಜ್ಯ ಕಸಾಪ ತೀವ್ರ ಎಚ್ಚರಿಕೆ ನೀಡಿದೆ
Laxmi News 24×7