ಚಿಕ್ಕೋಡಿ: ನಿನ್ನೆ ರಾತ್ರಿ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರೂ ಲೈಟ್ ಆಫ್ ಮಾಡದ್ದಕ್ಕೆ ಮಸೀದಿಗೆ ನುಗ್ಗಿ ಗಲಾಟೆ ಮಾಡಿದ ಘಟನೆ ಯಮಕನಮರಡಿ ಹಾಗೂ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಲೈಟ್ ಆನ್ ಇದೆ ಎಂದು ಮಸೀದಿಗೆ ನುಗ್ಗಿ ಗಲಾಟೆ ಮಾಡಿದ್ದ 9 ಜನರ ಗುಂಪನ್ನ ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿ ಮಸೀದಿಯಲ್ಲಿ ಗಲಾಟೆ ಮಾಡಿದ 13 ಜನರ ಗುಂಪನ್ನ ಸದಲಗಾ ಪೊಲೀಸರು ಬಂಧಿಸಿದ್ದಾರೆ.
ಮಸೀದಿಯಲ್ಲಿ ಗಲಾಟೆ ಮಾಡಿ ಶಾಂತಿ ಕದಡುವ ಯತ್ನ ನಡೆಸಿದ್ದ ದುಷ್ಕರ್ಮಿಗಳು ಅಂದರ್ ಆಗಿದ್ದು, ಪ್ರತ್ಯೇಕ 2 ಪ್ರಕರಣಗಳಲ್ಲಿ ಒಟ್ಟು 22 ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ಮೋದಿ ಕೊರೊನಾ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಹೀಗಾಗಿ ಭಾನುವಾರ ರಾತ್ರಿ 9 ಗಂಟೆಗೆ ಲೈಟ್ ಆಫ್ ಮಾಡಿ ದೀಪ/ ಕ್ಯಾಂಡಲ್ ಲೈಟ್/ ಮೊಬೈಲ್ ಟಾರ್ಚ್ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದ್ದರು. ಮೋದಿ ಜನರಲ್ಲಿ ಮನವಿ ಮಾಡಿದ್ದರೆಯೇ ಹೊರತು ಕಡ್ಡಾಯವಾಗಿ ಲೈಟ್ ಆಫ್ ಮಾಡಬೇಕೆಂದು ಸೂಚಿಸಿರಲಿಲ್ಲ.