ಸದ್ದಿಲ್ಲದೇ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ..?
ಹುಬ್ಬಳ್ಳಿ, ಮಾ,12-ಕೆಲವು ದಿನಗಳ ಹಿಂದೆ ರಾಜಕೀಯ ಸ್ವರೂಪ ಪಡೆದಿದ್ದ ಹುಬ್ಬಳ್ಳಿ ಪ್ರತಿಷ್ಠಿತ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ಸದ್ದಿಲ್ಲದೇ ಮಠದ ಉತ್ತರಾಧಿಕಾರಿ ನೇಮಕ ವಿಚಾರವನ್ನ ತಿಳಿಗೊಳಿಸಲು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ.
ಘಟಪ್ರಭದ ಮಲ್ಲಿಕಾರ್ಜುನ ಸ್ವಾಮೀಜಿಯನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆಯೇ ಅನ್ನೋ ಅನುಮಾನ ಮೂಡುತ್ತಿದೆ. ಯಾಕೆಂದರೆ ಇತ್ತೀಚೆಗೆ ಮಠದ ಉತ್ತರಾಧಿಕಾರಿ ವಿವಾದದಲ್ಲಿ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಮಲ್ಲಿಕಾರ್ಜುನ ಸ್ವಾಮೀಜಿ ನಡುವೆ ಜಟಾಪಟಿ ನಡೆದಿತ್ತು. ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ನಡೆಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಬರಿಗೈಯಲ್ಲಿ ವಾಪಸ್ ಆಗಿದ್ದರು. ಮಠದ ಉತ್ತರಾಧಿಕಾರಿಯಾಗಿ ನನ್ನ ನೇಮಕ ಮಾಡಲಾಗಿದೆ ಅಂತ ವಿವಾದ ಹುಟ್ಟುಹಾಕಿದ್ದರು.
ಆದ್ರೆ ಈಗ ನಿನ್ನೆ ನಡೆದ ಜಗ್ಗಲಗಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮೂಜಗು ಸ್ವಾಮೀಜಿಗಳು ಅಕ್ಕಪ್ಪಕ್ಕನೇ ಕುಳಿತು ವೇದಿಕೆ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಹೆಸರು ಕೇಳಿಬರುತ್ತಿದ್ದು ಈ ವೇದಿಕೆ ಹಂಚಿಕೊಂಡಿರುವ ವಿಚಾರ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ.