ರಾಮನಗರ: ಕರೊನಾದಿಂದ ಶಾಲೆಗಳು ಬಂದ್ ಆಗಿರುವ ಪರಿಣಾಮ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕಂಗಾಲಾಗಿರುವ ಸಂದರ್ಭದಲ್ಲೇ ಮಕ್ಕಳಿಗೆ ಮದ್ಯಪಾನ ಮಾಡಿಸಿ ಮತ್ತಿನಲ್ಲಿ ಅವರು ಆಡುವ ಆಟಗಳನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿತ್ತು.
ಬಾಳೆತೋಟವೊಂದರ ತೋಟದ ಮನೆ ಬಳಿ 10 ವರ್ಷದೊಳಗಿನ 7 ಮಕ್ಕಳಿಗೆ ಬಾಡೂಟದ ಜತೆ ಮದ್ಯ ನೀಡಿ ಕುಡಿಯುವಂತೆ ಉತ್ತೇಜಿಸುತ್ತಿರುವ ದೃಶ್ಯವನ್ನೊಳಗೊಂಡ ವಿಡಿಯೋ ಸೇರಿ 3 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಕುರಿತು ‘ವಿಜಯವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿದೆ.
ಇದನ್ನು ಕಂಡ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಅವರ ತಂಡ ತಕ್ಷಣವೇ ಕಾರ್ಯಚರಣೆಗೆ ಇಳಿದು, ಘಟನೆ ನಡೆದ ಮೂಲವನ್ನು ಪತ್ತೆ ಹಚ್ಚಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿ ಒಬ್ಬನನ್ನ ಬಂಧಿಸಿದ್ದಾರೆ.
ಘಟನೆ ಜೂ. ೨ ರಂದು ಕನಕಪುರ ತಾಲೂಕು ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಳಿಪುರ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರಮೋದ್, ಗಣೇಶ್ ಮತ್ತು ಶಂಭೇಗೌಡ ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು ಒಬ್ಬನನ್ನು ಬಂದಿಸಲಾಗಿದೆ. ಆರೋಪಿಗಳ ವಿರುದ್ದ ಎಪಿಡೆಮಿಕ್ಟ್ ಕಾಯ್ದೆ ಮತ್ತು ಜ್ಯುವೆಲೈನ್ ಕಾಯ್ದೆ ಯಡಿ ಪ್ರಕರಣ ದಾಖಲು ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ? ಮದ್ಯಪಾನ ಮಾಡಿದ ಬಳಿಕ ಮಕ್ಕಳು ಬೈದಾಡಿಕೊಳ್ಳುತ್ತಾರೆ. ಎಲ್ಲರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಬಾಲಕನೊಬ್ಬ ತನಗೆ ಮತ್ತಷ್ಟು ಎಣ್ಣೆ ಬೇಕು ಎಂದು ಕೂಗುವ ದೃಶ್ಯಗಳು ವಿಡಿಯೋಗಳಲ್ಲಿ ದಾಖಲಾಗಿದೆ.