ಇಂಡಿ(ವಿಜಯಪುರ): ಜಪಾನ್ ಪ್ರಧಾನಮಂತ್ರಿ ಅವರು ಏಷ್ಯಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಿರುವ (The Asia kakehashi project) ಒಂದು ವರ್ಷದ ಶಿಷ್ಯವೇತನ ಸಹಿತ ಉಚಿತ ಶಿಕ್ಷಣ ಪಡೆಯಲು ಇಂಡಿ ಪಟ್ಟಣದ ಗೌರಿ ಸಂಕೇತ ಬಗಲಿ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗೌರಿ ಬಗಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಜಪಾನ್ನಲ್ಲಿ ಒಂದು ವರ್ಷ ಉಚಿತ ಶಿಕ್ಷಣವನ್ನು ಅಲ್ಲಿಯ ಸರ್ಕಾರವೇ ನೀಡಲಿದೆ.
ಗೌರಿ ಬಗಲಿ ಸದ್ಯ ಕೋಲಾಪುರದ ಸಂಜಯ್ ಘೋಡಾವತ್ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ.
ಸಂಕೇತ್ ಬಗಲಿ ಮತ್ತು ಜಯಲಕ್ಷ್ಮೀ ದಂಪತಿ ಪುತ್ರಿಯಾದ ಗೌರಿ, ಇಂಡಿಯ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಅವರ ಮೊಮ್ಮಗಳು.
ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು 2017ರಲ್ಲಿ ಜಪಾನ್ ಮತ್ತು ಏಷ್ಯಾ ಖಂಡದ ದೇಶಗಳೊಂದಿಗೆ ಉತ್ತಮ ಭಾಂದವ್ಯ ವೃದ್ಧಿಸುವ ಸಲುವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ಶಿಷ್ಯವೇತನ ಮತ್ತು ಉಚಿತ ಶಿಕ್ಷಣ ಯೋಜನೆಯನ್ನು ಪ್ರಾಯೋಜಿಸಿದ್ದಾರೆ.