ಬೆಂಗಳೂರು, ಜ.23- ನಗರದಲ್ಲಿ ಮತ್ತೆ ಕೊರೊನಾ ಸ್ಫೋಟ ಭೀತಿ ಎದುರಾಗಿದೆ. ಬೆಳ್ಳಂದೂರು ವಾರ್ಡ್ನ ಅಪಾರ್ಟ್ಮೆಂಟ್ನ 500 ಮಂದಿಯ ಕೋವಿಡ್-19 ವರದಿ ಇಂದು ಸಂಜೆ ಬರಲಿದ್ದು, ಹೆಚ್ಚು ಮಂದಿಗೆ ಪಾಸಿಟಿವ್ ಕಂಡುಬಂದರೆ ನಗರದಲ್ಲಿ ಮತ್ತೆ ಕೊರೊನಾ ಅಲರ್ಟ್ ಘೋಷಣೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 15 ರಿಂದ 22ರ ಅವಧಿಯಲ್ಲಿ ಬೆಳ್ಳಂದೂರು ವಾರ್ಡ್, ಅಂಬಲಿಪುರದ ಎಸ್ಜೆಆರ್ ವಾಟರ್ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ 100 ಮಂದಿಗೆ ಕೊರೊನಾ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಇದಕ್ಕೂ ಮೊದಲು ಮಂಜುಶ್ರೀ ನರ್ಸಿಂಗ್ ಹೋಂನ 40 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಪತ್ತೆಯಾಗಿದ್ದು, ಅಲ್ಲೂ ಕೂಡ ಬಿಬಿಎಂಪಿ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈಗ ಈ ಅಪಾರ್ಟ್ಮೆಂಟ್ಗೆ ಸಂಬಂಧಪಟ್ಟ 500 ಮಂದಿಯ ಸ್ಯಾಂಪಲ್ಸ್ಅನ್ನು ಲ್ಯಾಬ್ಗೆ ಕಳುಹಿಸಲಾಗಿದ್ದು, ಅದರ ವರದಿ
ಇಂದು ಸಂಜೆ ಬರಲಿದೆ.ಹೆಚ್ಚು ಜನರಿಗೆ ಪಾಸಿಟಿವ್ ಇರುವುದು ಪತ್ತೆಯಾದರೆ ಮತ್ತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಲ್ಲದೆ ನಗರದಲ್ಲಿರುವ ಎಲ್ಲ ಅಪಾರ್ಟ್ಮೆಂಟ್ಗಳ ಮೇಲೆ ತೀವ್ರ ನಿಗಾ ವಹಿಸಬೇಕಾಗುತ್ತದೆ. ಈಗಾಗಲೇ ಆರೋಗ್ಯ ಸಚಿವರಾದ ಸುಧಾಕರ್ ಅವರು ಐದು ಜನರಿಗಿಂತ ಹೆಚ್ಚು ಪಾಸಿಟಿವ್ ಇರುವುದು ಪತ್ತೆಯಾದ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿ ಎಲ್ಲ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ.