ಬೆಂಗಳೂರು ಫೆ.23- ಕರ್ನಾಟಕ ರಾಜ್ಯ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಅನುಷ್ಠಾನದಲ್ಲಿ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಅಫೆಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯ ಅನುಷ್ಠಾನ, ಕೈಗಾರಿಕಾ ಸೌಲಭ್ಯ ಕಾಯ್ದೆಯ ತಿದ್ದುಪಡಿ ಮತ್ತು ಹೊಸ ಕೈಗಾರಿಕಾ ನೀತಿ ಘೋಷಣೆಯಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಕಾರ್ಯ ಸುಲಭವಾಗಿದೆ ಎಂದರು.
ನಗರದಲ್ಲಿಂದು ಅಸೋಚಾಮ್ ಆಯೋಜಿಸಿದ್ದ ನವ ಕರ್ನಾಟಕ ಈಸ್ ಆಫ್ ಡ್ಯೂಯಿಂಗ್ ಬ್ಯುಸಿನೆಸ್ ವೇಬಿನಾರ್ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಭಾರತ ದೇಶವನ್ನು ಕೈಗಾರಿಕಾ ಮತ್ತು ಬಂಡವಾಳ ಹೂಡಿಕೆ ಸ್ನೇಹಿ ದೇಶವನ್ನಾಗಿಸಿದೆ. ವಿಶ್ವ ಬ್ಯಾಂಕಿನ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಸೂಚ್ಯಾಂಕದಲ್ಲಿ 2014ನೇ ಸಾಲಿನಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತ ದೇಶ 2019ರಲ್ಲಿ 63 ನೇ ಸ್ಥಾನ ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿ ಎಂದರು.ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ ರಾಜ್ಯ, ಐಟಿ, ಮಾಹಿತಿ ತಂತ್ರಜ್ಞಾನ ಅವಲಂಬಿತ ಸೇವೆಗಳು, ಮಷೀನ್ ಟೂಲ್ಸ್, ಏರೋಸ್ಪೇಸ್, ಬಯೋಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಡಿಸೈನ್ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನ ಹೊಂದಿದೆ.