ಬೆಂಗಳೂರು : ಚಿನ್ನ ಕಳ್ಳಸಾಗಾಣಿಕೆ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರನ್ಯಾ ರಾವ್ ಅವರು ಜೈಲಿನಿಂದಲೇ ಡಿಆರ್ಐ ಅಡಿಷನಲ್ ಡೈರಕ್ಟರ್ ಜನರಲ್ಗೆ ಸುದೀರ್ಘವಾದ ಮನವಿ ಪತ್ರ ಬರೆದಿದ್ದಾರೆ. ಏಳು ಅಂಶಗಳ ಕುರಿತು ಪ್ರಸ್ತಾಪಿಸಿ ರನ್ಯಾ ರಾವ್ ಬರೆದಿರುವ ಮನವಿ ಪತ್ರವನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಡಿಆರ್ಐ ಎಡಿಜಿಯವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ರನ್ಯಾ ರಾವ್ ಮನವಿ ಪತ್ರದಲ್ಲೇನಿದೆ ? ದುಬೈನಿಂದ ಬಂದಿಳಿದ ನನ್ನ ವಿರುದ್ಧ ಚಿನ್ನ ಕಳ್ಳಸಾಗಾಣಿಕೆಯ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿಮ್ಮ ಅಧಿಕಾರಿಗಳು ನನಗೆ ವಿವರಣೆ ನೀಡಲು ಅವಕಾಶವನ್ನೇ ನೀಡಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ನಾನು ನಿರ್ದೋಷಿಯಾಗಿದ್ದೇನೆ, ವಿಮಾನದ ಒಳಗಿನಿಂದಲೇ ನನ್ನನ್ನು ವಶಕ್ಕೆ ಪಡೆಯಲಾಗಿದೆ. ನಂತರ ನನ್ನನ್ನ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ. ಈ ಅವಧಿಯೊಳಗೆ ಸುಮಾರು 10-15 ಬಾರಿ ನನಗೆ ಕಪಾಳಕ್ಕೆ ಹೊಡೆದು, ಹಲ್ಲೆ ಮಾಡಿದ್ದಾರೆ. ಅಧಿಕಾರಿಗಳು ಸಿದ್ಧಪಡಿಸಿದ ದಾಖಲೆ ಮೇಲೆ ಸಹಿ ಮಾಡಲು ನಿರಾಕರಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಅದರಲ್ಲಿಯೂ ಓರ್ವ ಅಧಿಕಾರಿ, ”ನೀನು ಸಹಿ ಮಾಡದಿದ್ದರೆ ಪ್ರಕರಣದಲ್ಲಿ ನಿನ್ನ ತಂದೆಯ ಪಾತ್ರವಿಲ್ಲದಿದ್ದರೂ ಸಹ ಅವರ ಹೆಸರನ್ನ ಬಹಿರಂಗಗೊಳಿಸುತ್ತೇವೆ” ಎಂದು ಒತ್ತಡ ಹೇರಿದ್ದಾರೆ. ನಿರಂತರ ಒತ್ತಡ ಹಾಗೂ ಹಲ್ಲೆಯಿಂದಾಗಿ ನಾನು ಅಧಿಕಾರಿಗಳು ಹೇಳಿದ 50-60 ಕಡೆಗಳಲ್ಲಿ ಸಹಿ ಮಾಡಬೇಕಾಯಿತು. ನನ್ನ ಮೇಲೆ ಹಲ್ಲೆಗೈದಿರುವ ಅಧಿಕಾರಿಯನ್ನ ನೋಡಿದರೆ ನಾನು ಗುರುತಿಸಬಲ್ಲೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಾರ್ಚ್ 3ರ ಸಂಜೆ 6.45ಕ್ಕೆ ವಶಕ್ಕೆ ಪಡೆದು ಮಾರ್ಚ್ 4ರ ರಾತ್ರಿ 7.30ಕ್ಕೆ ನನ್ನನ್ನು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ. ಈ ಅವಧಿಯೊಳಗೆ ನನಗೆ ಸೂಕ್ತವಾದ ಆಹಾರ ನೀಡಿಲ್ಲ. ಹಾಗೂ ನಿದ್ರೆ ಮಾಡಲು ಅವಕಾಶ ನೀಡಿಲ್ಲ. ಮಾನ್ಯ ಎಡಿಜಿ ಸರ್, ಡಿಆರ್ಐ ಅಧಿಕಾರಿಗಳಿಗೆ ಸೂಚಿಸಿರುವ ಕಾರ್ಯವೈಖರಿ ಇದೇನಾ? ಎಂದು ರನ್ಯಾ ಪ್ರಶ್ನೆ ಮಾಡಿದ್ದಾರೆ.