ಚನ್ನಮ್ಮನ ಕಿತ್ತೂರು: ಕಿತ್ತೂರ ನಾಡು ಹತ್ತೂರು ಕಲಾವಿದರನ್ನು ಬುಧವಾರ ಚುಂಬಕಶಕ್ತಿಯಂತೆ ಸೆಳೆಯಿತು. ಜನಪದರು, ಸಂಗೀತಗಾರರು, ನೃತ್ಯಪಟುಗಳು ಸೇರಿ ಕಲಾವಿದರ ದಂಡೇ ಕ್ರಾಂತಿಯ ನೆಲದತ್ತ ಹರಿದುಬಂದಿತ್ತು. ಬೆಳಿಗ್ಗೆ ಆರಂಭಗೊಂಡ ಜಾನಪದ ಕಲಾವಾಹಿನಿ ಮೆರವಣಿಗೆ ಮಧ್ಯಾಹ್ನದವರೆಗೂ ಸಾಗಿತು.
ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಈ ಮೆರವಣಿಗೆ ಮೇಲೂ ಕಾರ್ಮೋಡ ಕವಿದಿತ್ತು. ಆದರೆ, ವರುಣ ಬಿಡುವು ಕೊಟ್ಟಿದ್ದರಿಂದ ಮೆರವಣಿಗೆ ರಂಗೇರಿತು.
ಉತ್ಸವದ ಹಿನ್ನೆಲೆಯಲ್ಲಿ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗಾಗಿ ಶಾಲಾ ಮಕ್ಕಳೂ ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆಹಾಕಿದರು. ಚನ್ನಮ್ಮನ ಪರ ಜೈಕಾರಗಳನ್ನು ಕೂಗಿದರು. ಕೆಲವರು ಕುದುರೆ ಮೇಲೆ ಸವಾರಿ ಮಾಡಿ ಕಣ್ಮನಸೆಳೆದರು.
ವೈಭವಯುತವಾಗಿ ನಡೆದ ಮೆರವಣಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮಾತ್ರವಲ್ಲ; ಕರಾವಳಿ ಭಾಗದ ಹಾಗೂ ಹೊರರಾಜ್ಯದ ಕಲೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿತು.
ಕೇರಳದ ನಾಲ್ಕು ತಂಡಗಳು ಈ ಸಲದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ರವಿಶಂಕರ ತಂಡದವರು ಶಿವ-ಪಾರ್ವತಿ ರೂಪಕ, ಅಜಯ ತಂಡದವರು ತ್ರೈಯಂ, ಕಿಶನ್ ತಂಡದವರು ಕಥಕ್ಕಳಿ, ರಾಜೇಶ ತಂಡದವರು ಕವಾಡಿ ಪ್ರದರ್ಶಿಸಿ ಮೆರವಣಿಗೆಗೆ ಮೆರುಗು ತಂದರು.
ಚಿಕ್ಕಮಗಳೂರಿನ ಕೆ.ಬಿ.ಶೈಲಜಾ ತಂಡದವರು ಪ್ರದರ್ಶಿಸಿದ ಮಹಿಳಾ ವೀರಗಾಸೆ, ದಾವಣಗೆರೆಯ ವಸಂತಕುಮಾರ್ ಆರ್. ತಂಡದವರ ವೀರಗಾಸೆ, ಮಂಡ್ಯ ಜಿಲ್ಲೆಯ ಮಳವಳ್ಳಿಯ ಸವಿತಾ ಚಿರಕುಣ್ಣಯ್ಯ ತಂಡದವರ ಪೂಜಾ ಕುಣಿತ, ಸಾಗರದ ಶ್ರೀವತ್ಸ ಅವರ ಈಶ್ವರ ವೇಷ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿದವು. ಕೊರಟಗೆರೆಯ ಗಾರುಡಿ ಗೊಂಬೆ, ಶ್ರೀರಂಗಪಟ್ಟಣದ ಚಿಲಿಪಿಲಿ ಗೊಂಬೆ ಪುಟಾಣಿಗಳನ್ನು ಆಕರ್ಷಿಸಿತು. ಬೆಂಗಳೂರಿನ ಶಾಲಿನಿ ತಂಡದವರ ಯಕ್ಷಗಾನವು ಕರಾವಳಿಯ ಸಾಂಪ್ರದಾಯಿಕ ಕಲೆಯನ್ನು ಪರಿಚಯಿಸಿತು.