ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಬಣ ಬಡಿದಾಟ ಹೆಚ್ಚಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ಯತ್ನಾಳ್ ಬಣ ವಾಗ್ಬಾಣ ಬಿಡ್ತಿದೆ. ಇತ್ತ ಅದೇ ವಿಜಯೇಂದ್ರ ಹಾಗೂ ಬಿ ಎಸ್ ಯಡಿಯೂರಪ್ಪ ಅವರ ಪರವಾಗಿ ರೇಣುಕಾಚಾರ್ಯ ಅಂಡ್ ಟೀಂ ಟೊಂಕ ಕಟ್ಟಿ ನಿಂತಿದೆ.
ಎಂ ಪಿ ರೇಣುಕಾಚಾರ್ಯ ಅವರ ಟೀಂ ‘ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ’ ಸಮಾವೇಶ ಮಾಡಲು ಪ್ಲಾನ್ ಮಾಡಿದೆ. ಬರುವ ಮೇ 15 ರ ಒಳಗೆ ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳು, ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಯತ್ನಾಳ್ ವಿರುದ್ಧ ಶಕ್ತಿ ಪ್ರದರ್ಶಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
ಸಮಾವೇಶಗಳ ಕೇಂದ್ರ ಬಿಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆಸಿದ ‘ಸಿದ್ದರಾಮೋತ್ಸವ’ ಸಮಾವೇಶ. ಸಮಾವೇಶ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ರೇಣುಕಾಚಾರ್ಯ ಅಂಡ್ ಟೀಂ ಇದೇ ಪ್ಲಾನ್ ಇಟ್ಟುಕೊಂಡಿದೆ.
ಯತ್ನಾಳ್ ಅಂಡ್ ಟೀಂಗೆ ಮಾಸ್ಟರ್ ಸ್ಟ್ರೋಕ್ : ದಾವಣಗೆರೆ ಸೇರಿದಂತೆ ರಾಜ್ಯದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬಂತೆ ರೇಣುಕಾಚಾರ್ಯ ಅಂಡ್ ಟೀಂ ಹಾಗೂ ಯತ್ನಾಳ್ ಬಣ ತೋರಿಸಿಕೊಡುತ್ತಿದೆ. ಇದೀಗ ರೇಣುಕಾಚಾರ್ಯ ಅವರ ಬಣ ಒಂದು ಹೆಜ್ಜೆ ಮುಂದೆ ಹೋಗಿ ಯಡಿಯೂರಪ್ಪ ಪರ ಶಕ್ತಿ ಪ್ರದರ್ಶನ ಮಾಡುತ್ತಿದೆ.
ಅಲ್ಲದೆ ರಾಜ್ಯದ ಪ್ರತಿಯೊಂದು ಜಿಲ್ಲೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಿಂದಲೂ ವೀರಶೈವ ಲಿಂಗಾಯತರನ್ನು ಕರೆ ತಂದು ದಾವಣಗೆರೆಯಲ್ಲಿ ಸಮಾವೇಶ ಮಾಡಲು ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಇದೇ ವೇದಿಕೆಯಲ್ಲಿ ಮಠಾಧೀಶರನ್ನು ಸೇರಿಸುವ ಪ್ಲಾನ್ ಇದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಈ ಸಮಾವೇಶ ಮಾಡಿ ಮಾಸ್ಟರ್ ಸ್ಟ್ರೋಕ್ ಕೊಡಲು ದಾವಣಗೆರೆಯ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನೇತೃತ್ವ ಬಳಕೆ ಮಾಡಲಾಗಿದೆ ಎಂದಿದ್ದಾರೆ.
17 ಜಿಲ್ಲೆಗಳಲ್ಲಿ ಯಶಸ್ವಿ ಸಭೆ, 11 ಜಿಲ್ಲೆ ಬಾಕಿ : ವೀರಶೈವ ಲಿಂಗಾಯತ ಒಳಪಂಗಡಗಳ ಒಂದುಗೂಡಿಸಲು ರೇಣುಕಾಚಾರ್ಯ ಮುಂದಾಗಿದ್ದಾರೆ. ಇಲ್ಲಿಯ ತನಕ 17 ಜಿಲ್ಲೆಗಳಲ್ಲಿ ಸಭೆ ಮಾಡಿ ಯತ್ನಾಳ್ ಟೀಂಗೆ ಚಿಂತೆ ಮಾಡುವಂತೆ ಮಾಡಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
“17 ಬಿಲ್ಲೆಗಳಲ್ಲಿ ವೀರಶೈವ ಲಿಂಗಾಯತರ ಸಭೆ ಮಾಡಿದ್ದೇವೆ, ಬೀದರ್, ರಾಯಚೂರು, ಕಲಬುರಗಿ, ಬಾಗಲಕೋಟೆ, ವಿಜಯಪುರ, ಬೆಳಗಾವಿಯಲ್ಲಿ ಸಭೆ ಬಾಕಿ ಇದೆ. ಕಾರವಾರ, ಮಂಗಳೂರು ಮಾಡ್ತೇವೆ. 10 ಜಿಲ್ಲೆಗಳಲ್ಲಿ ಸಭೆ ಮಾಡುವುದು ಬಾಕಿ ಇದೆ. ಎಲ್ಲಾ ಜಿಲ್ಲೆಗಳಲ್ಲಿ ಮಠಾಧೀಶರು, ನಿವೃತ್ತ ಸರ್ಕಾರಿ ನೌಕರರು ಒಂದಾಗಿದ್ದಾರೆ. ದುಷ್ಟ ಶಕ್ತಿಗಳು ಸಮಾಜವನ್ನು ಎತ್ತಿಕಟ್ಟಿದ್ದಾರೆ. 9 ಜನ ನಮ್ಮ ಸಮಾಜದವರು ಸಿಎಂ ಆಗಿದ್ದಾರೆ. ಎಲ್ಲರಿಗೂ ಈ ದುಷ್ಟ ಶಕ್ತಿಗಳು ಕಾಟಕೊಟ್ಟಿವೆ” ಎಂದು ಆರೋಪಿಸಿದರು.
Laxmi News 24×7