ಹುಬ್ಬಳ್ಳಿ: ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಗೋವಾ ನಡುವೆ ರೈಲು ಸಂಪರ್ಕ ಭಾಗಶಃ ಕಡಿತಗೊಂಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ರೈಲ್ವೆ ಹಳಿ ಕಾಮಗಾರಿ ಕಾರಣದಿಂದಾಗಿ ಹುಬ್ಬಳ್ಳಿ ಹಾಗೂ ವಾಸ್ಕೋಡಗಾಮಾ ನಡುವೆ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಏಪ್ರಿಲ್ ಮಧ್ಯಭಾಗದವರೆಗೆ ಭಾಗಶಃ ರದ್ದುಗೊಳಿಸಲಾಗಿದೆ. ಅವುಗಳ ಪೈಕಿ ಶಾಲಿಮಾರ್ನಿಂದ ವಾಸ್ಕೋಡಿಗಾಮಾಕ್ಕೆ ಹೋಗಬೇಕಾದ ಅಮರಾವತಿ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಹುಬ್ಬಳ್ಳಿಗೆ ಮೊಟಕುಗೊಳಿಸಲಾಗಿದೆ. ಈ ರೈಲು ವಾರದಲ್ಲಿ ನಾಲ್ಕು ದಿನ ಅಂದರೆ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶನಿವಾರ ಶಾಲಿಮಾರ್ನಿಂದ ಹುಬ್ಬಳ್ಳಿಗೆ ಆಗಮಿಸುತ್ತದೆ.
ಎಲ್ಲಿಂದ ಹೊರಡಲಿವೆ ಬಸ್ಗಳು?: ಶಾಲಿಮಾರ್ನಿಂದ ಹಾಗೂ ಮಾರ್ಗ ಮಧ್ಯದ ವಿವಿಧ ಸ್ಥಳಗಳಿಂದ ಈ ರೈಲಿನ ಮೂಲಕ ಹುಬ್ಬಳ್ಳಿಯವರೆಗೆ ಆಗಮಿಸಿ ಗೋವಾಕ್ಕೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಪಣಜಿ, ವಾಸ್ಕೋ, ಮಡಗಾಂವ ಮತ್ತಿತರ ಸ್ಥಳಗಳಿಗೆ ನೇರ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಬಸ್ಗಳು ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡಲಿವೆ.