ಬೆಂಗಳೂರು: ನಿಮ್ಮ ವಿರುದ್ಧ ಯಾವುದೇ ಕೆಲಸ ಮಾಡೋದಿಲ್ಲ. ರಾಜ್ಯದ ಹಿತ ಕಾಪಾಡೋಕೆ ನಾವಿದ್ದೀವಿ, ದಯವಿಟ್ಟು ಬಂದ್ ಕೈಬಿಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಸರ್ಕಾರದ ಪರವಾಗಿ ನಮ್ರತೆಯ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಹೋರಾಟ ಮಾಡ್ತಿವೆ. ಹೋರಾಟ ಮಾಡೋದು ತಪ್ಪಲ್ಲ, ಆದ್ರೆ ವಾಸ್ತವಾಂಶ ಗೊತ್ತಿರಲಿ. ರಾಜ್ಯದ ಹಿತ ರಕ್ಷಣೆಗೆ ನಾವಿದ್ದೇವೆ, ನೀವೆಲ್ಲ ಸೇರಿ ನಮಗೆ ಅಧಿಕಾರ ಕೊಟ್ಟಿದ್ದೀರಿ, ನಿಮ್ಮ ವಿರುದ್ಧ ಯಾವುದೇ ಕಾರಣಕ್ಕೂ ಕೆಲಸ ಮಾಡಲ್ಲ. ದಯವಿಟ್ಟು ಬಂದ್ ವಿಚಾರ ಕೈಬಿಡಬೇಕು ಎಂದು ಕನ್ನಡಪರ ಹೋರಾಟಗಾರರಿಗೆ ಮನವಿ ಮಾಡಿದ್ದಾರೆ.
ನಾವೇ ನಿಮ್ಮ ಪರವಾಗಿದ್ದೇವೆ, ಕರ್ನಾಟಕ ಬಂದ್ ಮಾಡೋದ್ರಿಂದ ಯಾವುದೇ ಪರಿಹಾರ ಸಿಗಲ್ಲ. ಕಾನೂನು ವ್ಯವಸ್ಥೆ ಬೇರೆ ಇದೆ, ಕೋರ್ಟ್ ಆದೇಶ ಬೇರೆ ಇದೆ. ಬಂದ್ ಮಾಡಿದ್ರೆ ಜನರಿಗೆ ಎಷ್ಟು ತೊಂದರೆ ಆಗುತ್ತೆ ಅನ್ನೋದು ನಿಮಗೂ ಗೊತ್ತಿದೆ, ನೀವೂ ಆಲೋಚನೆ ಮಾಡಬೇಕು. ಆದ್ದರಿಂದ ಬಂದ್ ಮಾಡಬೇಕೆಂಬ ನಿಮ್ಮ ತೀರ್ಮಾನ ದಯವಿಟ್ಟು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲ ಸಮಯದಲ್ಲಿ ಬದ್ಧತೆ ತೋರಿಸಿದೆ. ಬಿಜೆಪಿ ಅವರು, ಯಡಿಯೂರಪ್ಪ ಅವರ ಪ್ರತಿಭಟನೆ ಅವಶ್ಯಕತೆ ಇರಲಿಲ್ಲ, ಅವರ ಸಂಸದರು ಕೂಡ ಪ್ರಯತ್ನಿಸಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಹಿತಕ್ಕೆ ಬದ್ಧರಾಗಿರೋಣ, ಅಲ್ಲೇ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ಅಲ್ಲಿಯವರೆಗೂ ನೀರು ಬಿಡೋದಿಲ್ಲ ಎಂದು ಹೇಳಿದ್ದಾರೆ.
100 ವರ್ಷದಲ್ಲೇ ಅತ್ಯಂತ ಕಡಿಮೆ ನೀರು
ಇಲ್ಲಿ ತನಕ ತಮಿಳುನಾಡಿಗೆ ಜುಲೈ ತಿಂಗಳಲ್ಲಿ 100 ವರ್ಷದಲ್ಲಿ ಇದೇ ಮೊದಲು ಕಡಿಮೆ ನೀರು ಬಿಡಲಾಗಿದೆ. ಜುಲೈ ತಿಂಗಳಲ್ಲಿ ಕೇವಲ 0.6 tmc ನೀರು ಮಾತ್ರ ನೀರು ಬಿಟ್ಟಿದ್ದೇವೆ. ಇದು ಕಳೆದ ನೂರು ವರ್ಷದ ಇತಿಹಾಸದಲ್ಲಿ ಕಡಿಮೆ ಎಂದು ಹೇಳಿದ್ದಾರೆ.
Laxmi News 24×7