ಬೆಂಗಳೂರು: ನನ್ನ ಮಗುವೇ ನನ್ನ ಶಕ್ತಿ ಆಗಿದ್ದು ಚಿರು ಎಲ್ಲ ನನ್ನ ಕೈಯಿಂದ ಮಾಡಿಸಿದ್ದಾರೆ. ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಆದರೆ ನನ್ನ ಮಗುವನ್ನು ನೋಡಿದಾಗ ಚಿರು ಕಾಣಿಸ್ತಾರೆ ಎಂದು ಹೇಳಿ ಮೇಘನಾ ಸರ್ಜಾ ಕಣ್ಣೀರು ಹಾಕಿದ್ದಾರೆ.
ಇಂದು ಚಿರು ಮಗುವಿನ ತೊಟ್ಟಿಲ ಶಾಸ್ತ್ರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ದಿನಗಳ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಮೇಘನಾ ಸರ್ಜಾ, ಕಷ್ಟದ ಸಮಯವನ್ನು ಫೇಸ್ ಮಾಡುವುದನ್ನು ನಾನು ಚಿರುನಿಂದ ಕಲಿತೆ. ಚಿರು ಅಂದ್ರೆ ನನ್ನ ಹ್ಯಾಪಿನೆಸ್. ಮಗ ಬಂದಿರೋದು ಡಬಲ್ ಸಂಭ್ರಮ ಬಂದಿದೆ ಎಂದು ಅಗಲಿಕೆಯ ನೋವಿನಲ್ಲೂ ಸಂತಸ ವ್ಯಕ್ತಪಡಿಸಿದರು.
ಚಿರು ಬೂದಿ ಮುಚ್ಚಿದ ಕೆಂಡದಂತೆ. ಆದರೆ ಈ ರೀತಿ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಇಂದು ಮಗನ ತೊಟ್ಟಿಲಶಾಸ್ತ್ರ. ಇದು ನನ್ನ ಪಾಲಿಗೆ ಮರೆಯಲಾಗದ್ದು ಎಂದು ಹೇಳಿದರು.
ಬಹಳ ದಿನಗಳ ಬಳಿಕ ನಾನು ಮಾಧ್ಯಮದ ಮುಂದೆ ಬಂದಿದ್ದೇನೆ. ನೀವು ನನ್ನನ್ನ ಮನೆ ಮಗಳಾಗಿ ನೋಡಿದ್ದೀರಿ. ನಿಮಗೆ ಎಷ್ಟು ಸಮಯ ಕೊಟ್ಟರೂ ಸಾಲುವುದಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮೇಘನಾ ತಿಳಿಸಿದರು.