ವಿಜಯಪುರ: ತಾನು ಸಚಿವನಾಗಲು ಯಾರ ಕಾಲಿಗೂ ಬೀಳುವುದಿಲ್ಲ. ಈ ದೀಪಾವಳಿ, ಸಿಹಿ ನೀಡುತ್ತದೆಯೋ, ಕಹಿ ನೀಡುತ್ತದೆಯೋ ಎಂದು ನವೆಂಬರ್ 25 ರವರೆಗೆ ಕಾದು ನೋಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜಕೀಯವಾಗಿ ಮತ್ತೊಂದು ಕುತೂಹಲದ ಬಾಂಬ್ ಎಸೆದಿದ್ದಾರೆ.
ನಗರದಲ್ಲಿ ನಡೆದ ವಸತಿ ಯೋಜನೆ ಸಮುಚ್ಛಯ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭೀಮಾ ನದಿ ಪ್ರವಾಹ ಸಂತ್ರಸ್ತರಿಗೂ 25 ಸಾವಿರ ರೂ. ನೀಡುವ ಕುರಿತು ಸಿ.ಎಂ. ಯಡಿಯೂರಪ್ಪ ಸಚಿವ ಸೋಮಣ್ಣ ಅವರ ಮೂಲಕ ಸಂದೇಶ ಕಳಿಸಿದ್ದಾರೆ. ಹೀಗಾಗಿ ಪ್ರವಾಹ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ನಿವಾರಣೆ ನಿರೀಕ್ಷೆ ಇದೆ ಎಂದರು.