ಬೆಂಗಳೂರು: ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳು ಜಯಗಳಿಸುತ್ತಿದ್ದಂತೆ ಆಡಳಿತ ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಸಚಿವ ರಮೇಶ ಜಾರಕಿಹೊಳಿ ಕೆಲ ಶಾಸಕರು ಮಹತ್ವ ಸಭೆ ನಡೆಸಿದ್ದಾರೆ.
ನಾಳೆ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಇಂದು ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬೆಳ್ಳಿ ಪ್ರಕಾಶ, ರಾಜುಗೌಡ ನಾಯಕ, ಶಂಕರ ಪಾಟೀಲ್ ಸೇರಿದಂತೆ ಮುಂತಾದ ಶಾಸಕರು ರಹಸ್ಯ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸೋತವರಿಗೆ ಮಣೆ ಹಾಕದಂತೆ ಒತ್ತಡ:
ಈ ಹಿಂದೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಈಗಲೂ ಸೋತವರಿಗೆ ಯಾಕೆ ಮಣೆ ಹಾಕಲಾಗ್ತಿದೆ. ಚುನಾವಣೆಯಲ್ಲಿ ಸೋತ ಸಿ.ಪಿ. ಯೋಗಿಶ್ವರ ಅವರಿಗೂ ಮಣೆ ಹಾಕಲಾಗುತ್ತಿದೆ. ಚುನಾವಣೆಯಲ್ಲಿ ಗೆದ್ದವರು ಬಹುತೇಕ ಹಿರಿಯರಿದ್ದೇವೆ. ಹೀಗಾಗಿ ಸಿ.ಪಿ ಯೋಗೇಶ್ವರ್ ಪರ ವಕಾಲತ್ತು ವಹಿಸದಂತೆ ಶಾಸಕರು, ರಮೇಶ ಜಾರಕಿಹೊಳಿ ಎದುರು ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಸಭೆ ಬಳಿಕ ಶಾಸಕ ರಾಜುಗೌಡ ಮಾತನಾಡಿದ್ದು, ರಮೇಶ ಜಾರಕಿಹೊಳಿ ಅವರ ಮನೆಗೆ ಊಟಕ್ಕೆ ಬಂದಿದ್ದೇವೆ. ಹಾಗೇ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದೇವೆ. ನಮಗೂ ಮಂತ್ರಿ ಸ್ಥಾನ ಕೊಟ್ರೆ ಬೇಡ ಅನ್ನಲ್ಲ ಅಂತಾ ಹೇಳಿದ್ದಾರೆ.