ಮುಖ್ಯಮಂತ್ರಿ ಹಾಗೂ ಸಚಿವರ ಅತಿವೃಷ್ಟಿಯ ವೀಕ್ಷಣೆ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.
ಕುಮಾರಸ್ವಾಮಿ ಆರೋಪಿಸಿದರು.
ಶಿಡ್ಲಘಟ್ಟದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್. ರವಿಕುಮಾರ್ ಅವರ ಮನೆಗೆ ಗುರುವಾರ ಭೇಟಿ ನೀಡಿದ್ದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸೌಹಾರ್ದ ಭೇಟಿ ಇದಾದರೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಮುಂದಿನ ವಾರ ಮತ್ತೆ ಭೇಟಿ ನೀಡಿ ಚುನಾವಣೆ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
‘ಈ ಹಿಂದೆ ನಾನು ರವಿಕುಮಾರ್ ಅವರ ಬಗ್ಗೆ ತಪ್ಪಾಗಿ ಗ್ರಹಿಸಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಶಕ್ತಿ, ಅವರು ಹಾಗೂ ಕಾರ್ಯಕರ್ತರ ನಡುವಿನ ಬಾಂಧವ್ಯದ ಬಗ್ಗೆ ತಿಳಿದುಕೊಂಡೆ. ಮಗಳ ಸಾವಿನ ನೋವಿನಲ್ಲೂ ಮನೆಯಲ್ಲಿ ಕೂರಬೇಡಿ. ನಿಮ್ಮನ್ನು ನಂಬಿದ ಕಾರ್ಯಕರ್ತರ ಕಷ್ಟ, ಸುಖದಲ್ಲಿ ಭಾಗಿಯಾಗಬೇಕು’ ಎಂದು ಹೇಳಿದರು.
ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಳ್ಳುತ್ತವೆ. ಆದರೆ, ಜೆಡಿಎಸ್ ಮೇಲೆ ಒಳಒಪ್ಪಂದದ ಅಪಪ್ರಚಾರ ಮಾಡಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು
ದೂರಿದರು.
ಬಿಜೆಪಿಯ ಸಾಕಷ್ಟು ಮಂತ್ರಿಗಳಿಗೆ ಜನಸಾಮಾನ್ಯರ ಕಷ್ಟ ಅರಿಯಲು ಪುರುಸೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನಸಾಮಾನ್ಯರೇ ಬಿಜೆಪಿ ಹಾಗೂ ಕಾಂಗ್ರೆಸ್ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಬಿ.ಎನ್. ರವಿಕುಮಾರ್, ಮಾಜಿ ಶಾಸಕರಾದ ಬಚ್ಚೇಗೌಡ, ವೆಂಕಟಶಿವಾರೆಡ್ಡಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನೇಗೌಡ, ಬಿ.ಎನ್. ಸಚಿನ್, ವಕ್ಕಲೇರಿ ರಾಮು, ಬಂಕ್ ಮುನಿಯಪ್ಪ
ಹಾಜರಿದ್ದರು.