Breaking News

ಸಹಾಯಧನ, ಪಿಂಚಣಿ ಸ್ಥಗಿತಗೊಳಿಸಿ ಕಾಂಗ್ರೆಸ್‌ಗೆ ಸಾಧನಾ ಸಮಾವೇಶ ಮಾಡುವ ಯೋಗ್ಯತೆ ಇದ್ಯಾ? – ಆರ್.ಅಶೋಕ್

Spread the love

ಬೆಂಗಳೂರು: ರಾಜ್ಯದಲ್ಲಿ ಅನಾಥರು, ವೃದ್ಧರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ, ಅಸಹಾಯಕ ಜನವರ್ಗಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಹಾಗೂ ಪಿಂಚಣಿ ಸ್ಥಗಿತಗೊಂಡಿದೆ. ಈ ರೀತಿ ಖಜಾನೆ ಖಾಲಿಯಾಗಿದ್ದರೂ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್ ನಾಯಕರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್  ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಪಾಪಗಳಿಗಾಗಿ ಸಮಾವೇಶ ನಡೆಸಿ, ಸಂಭ್ರಮಾಚರಣೆ ಮಾಡುತ್ತಿದೆ. ಭಿಕ್ಷುಕರಿಗೆ, ಸಹಾಯಧನ ಪಡೆಯುವವರಿಗೆ ಆರ್ಥಿಕ ಸಹಾಯ ಸ್ಥಗಿತಗೊಂಡಿದ್ದು, ಕಳೆದ ಮೂರು ವರ್ಷದಿಂದ ಸರ್ಕಾರ ಇವರನ್ನು ಶೋಷಣೆ ಮಾಡುತ್ತಿದೆ. ಗೃಹಲಕ್ಷ್ಮಿಯ 5,000 ಕೋಟಿ ರೂ., ಅನ್ನಭಾಗ್ಯದ 700 ಕೋಟಿ ರೂ. ಇನ್ನೂ ಫಲಾನುಭವಿಗಳಿಗೆ ಸಿಕ್ಕಿಲ್ಲ. ಅನಾಥ ಮಕ್ಕಳ 73 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿಗಳ 45,000 ಕೋಟಿ ರೂ. ಲೂಟಿಯಾಗಿದೆ. ಸಮೀಕ್ಷೆಯ ಹೆಸರಲ್ಲಿ ಇನ್ನೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಕಂದಾಯ ಇಲಾಖೆಯಡಿ 12 ಬಗೆಯ ಪಿಂಚಣಿಗಳನ್ನು ಮೂರು ತಿಂಗಳಿಂದ ಕೊಟ್ಟಿಲ್ಲ. ಈ ಪಿಂಚಣಿ ಯೋಜನೆಯಗಳಡಿ 81.88 ಲಕ್ಷ ಫಲಾನುಭವಿಗಳಿದ್ದು, ತಿಂಗಳಿಗೆ 894 ಕೋಟಿ ರೂ. ನೀಡಬೇಕಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ 10,736 ಕೋಟಿ ರೂ. ಮೀಸಲಿಟ್ಟರೂ ಈ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಹರಿಹಾಯ್ದಿದ್ದಾರೆ.

ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಸಹಾಯಧನ ಮೊದಲಾದವು ಇನ್ನೂ ನೀಡಿಲ್ಲ. ನಾನು ಸಚಿವನಾಗಿದ್ದಾಗ, ಆ್ಯಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳ ನೆರವಿಗೆ ತಿಂಗಳಿಗೆ 10,000 ರೂ. ನೀಡಲು ಕ್ರಮವಹಿಸಿದ್ದೆ. ಅದನ್ನೂ ಈ ಸರ್ಕಾರ ನಿಯಮಿತವಾಗಿ ನೀಡುತ್ತಿಲ್ಲ. ದೇವದಾಸಿಯರಿಗೆ 2,000 ರೂ., ಸ್ವಾತಂತ್ರ‍್ಯ ಹೋರಾಟಗಾರರಿಗೆ 10,000 ರೂ., ಹೀಗೆ ಯಾವುದನ್ನೂ ನೀಡುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ 10,000 ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ. ನುಡಿದಂತೆ ನಡೆಯುತ್ತೇನೆ ಎಂದು ಹೇಳಿಕೊಟ್ಟ ಭರವಸೆ ಮರೆತ್ತಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದೆ ಪದೇ ಪದೇ ಮುಷ್ಕರ ಮಾಡುವ ಸನ್ನಿವೇಶ ನಿರ್ಮಿಸಿದ್ದಾರೆ ಎಂದು ದೂರಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ಜನಸ್ಪಂದನ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವರು ಕಮಿಷನ್‌ಗೆ ಸ್ಪಂದಿಸುತ್ತಿದ್ದಾರೆ. ಪ್ರತಿ 15 ದಿನಕ್ಕೆ ಒಮ್ಮೆ ಬೆಂಗಳೂರು ಸಿಟಿ ಪ್ರದಕ್ಷಿಣೆ ಮಾಡುತ್ತೇನೆಂದ ಸಿದ್ದರಾಮಯ್ಯ ಕೂಡ ಕಮಿಶನ್ ಹಿಂದೆ ಬಿದ್ದಿದ್ದಾರೆ. ನಗರದಲ್ಲಿ ಇ ಖಾತಾ ಅಭಿಯಾನ, ಬಿ ಖಾತಾದಿಂದ ಎ ಖಾತಾ ವರ್ಗಾವಣೆ ಮಾಡುತ್ತೇನೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವುದು ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಮುಚ್ಚಿದಂತಾಗಿದೆ. ಇದರಡಿಯಲ್ಲಿ ಅಧಿಕಾರಿ, ಸಿಬ್ಬಂದಿ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಫೋನ್ ಪೇ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಅಧಿವೇಶನದಲ್ಲಿ ಹೇಳಿದ್ದರೂ ಅದರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ನೀಟ್ ರದ್ಧತಿಗೆ ಮನನೊಂದು ಸರಣಿ ಆತ್ಮಹತ್ಯೆ – ನಾಲ್ವರು ಆಕಾಂಕ್ಷಿಗಳು ಸೂಸೈಡ್

Spread the loveನವದೆಹಲಿ: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ