ಬೆಂಗಳೂರು: ‘ರವಿಚಂದ್ರನ್ ಯಾವತ್ತಿದ್ದರೂ ನನಗೆ ಲಕ್ಕಿ. ನನ್ನ ಸಿನಿಮಾದ ಯಾವುದಾದರೂ ಕಾರ್ಯಕ್ರಮಕ್ಕೆ ಅವರನ್ನು ಕರೆಸಬೇಕೆಂಬ ಆಸೆ ತುಂಬ ದಿನಗಳಿಂದ ಇತ್ತು. ಇದೀಗ ಆ ಕನಸು ನನಸಾಗಿದೆ …’
ಹೀಗೆ ಖುಷಿಯಾಗಿ ಹೇಳಿಕೊಂಡರು ಪ್ರಿಯಾಂಕಾ ಉಪೇಂದ್ರ. ಅವರು ‘ಮಿಸ್ ನಂದಿನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಅಧಿಕೃತವಾಗಿತ್ತು. ಇದೀಗ ಸದ್ದಿಲ್ಲದೆ ಮುಹೂರ್ತ ಮುಗಿಸಿ, ಶೂಟಿಂಗ್ ಸಹ ಶುರುಮಾಡಿದೆ ತಂಡ. ಈ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡಿ ಶುಭಾಶಯ ಕೋರಿದರು.
ಈ ಹಿಂದೆ ‘ಸೈಕೋಪಾತ್’ ಸಿನಿಮಾ ನಿರ್ದೇಶನ ಮಾಡಿದ್ದ ಗುರುದತ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಹೊಸಬರ ಜತೆಗೆ ಸಿನಿಮಾ ಮಾಡುವುದು ಒಂದು ರೀತಿಯ ಹೊಸ ಅನುಭವ. ಕಲಿಯುವುದಕ್ಕೂ ಹೆಚ್ಚಿರುವುದರಿಂದ ನನ್ನ ಬಹುತೇಕ ಸಿನಿಮಾಗಳು ಅವರ ಜತೆಯಲ್ಲಿಯೇ ಮಾಡುತ್ತಿದ್ದೇನೆ’ ಎನ್ನುವ ಪ್ರಿಯಾಂಕಾ, ಈ ಸಿನಿಮಾ ವಿಶೇಷತೆಯನ್ನೂ ಹೇಳಿಕೊಂಡಿದ್ದಾರೆ. ‘ಇಲ್ಲಿಯವರೆಗೂ ಬೇರೆಬೇರೆ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ಇದೀಗ ಶಿಕ್ಷಕಿ ಪಾತ್ರ ಸಿಕ್ಕಿದೆ. ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಕಥೆ ಇದು. ನಿರ್ದೇಶಕರು ಸಂದೇಶದ ಜತೆಗೆ ಕಮರ್ಷಿಯಲ್ ಅಂಶಗಳನ್ನೂ ಕಥೆಯಲ್ಲಿ ಸೇರಿಸಿದ್ದಾರೆ’ ಎನ್ನುತ್ತಾರೆ.