ಹುಬ್ಬಳ್ಳಿ: ದೇಹದ ಯಾವ್ಯಾವುದೋ ಭಾಗದಲ್ಲಿ ಅಡಗಿಸಿಟ್ಟುಕೊಂಡು ವಿದೇಶಗಳಿಂದ ವಿಮಾನದ ಮೂಲಕ ಚಿನ್ನ ಕದ್ದು ತರೋದನ್ನು ನೋಡಿದ್ದೇವೆ. ಹುಬ್ಬಳ್ಳಿಯಲ್ಲೊಬ್ಬ ಬೆಲ್ಟ್ ನಲ್ಲಿ ಚಿನ್ನದ ಗಟ್ಟಿಗಳನ್ನು (Gold Smuggling) ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹತ್ತಿರ ಹತ್ತಿರ ಒಂದು ಕೆ.ಜಿ.ಯಷ್ಟು ತೂಕದ ಎರಡು ಚಿನ್ನದ ಗಟ್ಟಿಗಳನ್ನು ಬೆಲ್ಟ್ ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸೋ ವೇಳೆ ಪೊಲೀಸರ (Hubballi Police) ಬಲೆಗೆ ಬಿದ್ದಿದ್ದಾನೆ.
ಗಾಂಜಾ ಮಾರಾಟ ಪ್ರಕರಣದಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿ ಪೊಲೀಸರು, ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅಕ್ರಮ ಚಿನ್ನ ಸಾಗಾಟಗಾರನನ್ನು ಬಂಧಿಸೋ ಮೂಲಕ ಗಮನ ಸೆಳೆದಿದ್ದಾರೆ. ಹುಬ್ಬಳ್ಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿರೋ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ವ್ಯಕ್ತಿಯಿಂದ 38 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದೆ.
ನಿನ್ನೆ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಹುಬ್ಬಳ್ಳಿಯ ಕೇಶ್ವಾಪುರದ ಚೇತನ್ ಎಂಬಾತನನ್ನು ಬಂಧಿಸಿದ್ದರು. ಬಂಧಿತನಿಂದ 804 ಗ್ರಾಂ ತೂಕದ ಎರಡು ಚಿನ್ನ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಯ ಗಿರಣಿಚಾಳ ಬಳಿ ಚಿನ್ನ ಸಾಗಟ ಮಾಡುತ್ತಿದ್ದ ವೇಳೆ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚೇತನ್ ತನ್ನ ಬೆಲ್ಟ್ ನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ. ಯಾರ ಕಣ್ಣಿಗೂ ಬೀಳಬಾರದೆಂದು ಸದ್ದಿಲ್ಲದೆ ಹೋಗುತ್ತಿದ್ದ ಚೇತನ್ ನನ್ನು ಗಿರಿಣಿ ಚಾಳದ ಏಳು ಮಕ್ಕಳ ತಾಯಿ ಗುಡಿಯ ಬಳಿ ಬಂಧಿಸಿ, ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ.
ಗಾಂಜಾ ಮಾರಾಟ ಮಾಡಿದ್ದ ಪೊಲೀಸರು!
ಗಾಂಜಾ ಮಾರಾಟ ಮಾಡುವವರನ್ನ ಬಂಧಿಸಿದ ಪೊಲೀಸರಿಂದಲೇ ಗಾಂಜಾ ಮಾರಾಟ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಶಪಡಿಸಿಕೊಂಡ ಗಾಂಜಾವನ್ನು ಪೊಲೀಸರೇ ಮಾರಾಟ ಮಾಡುತ್ತಿದ್ದರೆಂಬ ಅಂಶ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 30 ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದ ನವನಗರದ ಎಪಿಎಂಸಿ ಠಾಣೆ ಪೊಲೀಸರು ಅವರಿಂದ ಹಣ ಪಡೆದಿದ್ದರು. ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಿದ್ದರೆಂಬ ಆರೋಪ ಕೇಳಿ ಬಂದಿತ್ತು. ಹಣ ಪೀಕಿ ಆರೋಪಿಗನ್ನು ಬಿಟ್ಟಿದ್ದ ಪೊಲೀಸರು, ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾವನ್ನು ತಾವೇ ಮಾರಾಟ ಮಾಡೋ ಮೂಲಕ ಖಾಕಿಗೆ ಕಪ್ಪು ಮಸಿ ಬಳಿಯೋ ಪ್ರಯತ್ನ ಮಾಡಿದ್ದಾರೆ ಎಂದು ದೂರು ಕೇಳಿಬಂದಿದೆ. ಠಾಣೆಯ ಪಿಐ ಸೇರಿ 7 ಮಂದಿಯನ್ನು ಅಮಾನತು ಮಾಡಲಾಗಿದೆ.
ಮನೆ ಬಾಗಿಲು ಮುರಿದು ಲಕ್ಷಾಂತರ ಚಿನ್ನ ದೋಚಿದ ಖದೀಮರು
ಇನ್ನು ಮತ್ತೊಂದೆಡೆ ಹುಬ್ಬಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಮನೆಯ ಬಾಗಿಲಿನ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರೋ ಕಾಳಿದಾಸ ನಗರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿದ್ದಾರೆ. ಪರ್ವತಗೌಡ ಪಾಟೀಲ ಎಂಬುವವರ ಮನೆಯ ಕೀಲಿ ಮುರಿದು ಒಳ ನುಗ್ಗಿರೋ ಖದೀಮರು, 6 ಲಕ್ಷ 10 ಸಾವಿರ ರೂಪಾಯಿ ಮೌಲ್ಯದ 210 ಗ್ರಾಂ ಚಿನ್ನವನ್ನ ದೋಚಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.