ತೆಕ್ಕಟ್ಟೆ : ಕಳೆದ ಮೂರು ದಿನಗಳಿಂದ ಶ್ವಾನದ ತಲೆಗೆ ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿ ಸಿಲುಕಿ ಪರದಾಡುತ್ತಿದ್ದು, ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳ ಸಮಯ ಪ್ರಜ್ಞೆಯಿಂದಾಗಿ ರಕ್ಷಿಸಿದ ಘಟನೆ ಅ.2 ರಂದು ಸಂಭವಿಸಿದೆ.
ಘಟನೆ : ಹಿರಿಯ ಪರಿಸರವಾದಿ ಕೊರ್ಗಿ ವಿಠಲ್ ಶೆಟ್ಟಿ ಅವರು ಅ.2 ರಂದು ತಮ್ಮ 76ನೇ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಕೋಣಿ ಮಾನಸ ಜ್ಯೋತಿಯ ವಿಶೇಷ ಚೇತನ ಮಕ್ಕಳಿಗಾಗಿ ಹಣ್ಣು ಹಂಪಲು ವಿತರಣೆಗೆಂದು ತೆರಳಿದ ಸಂದರ್ಭದಲ್ಲಿ ಅಲ್ಲಿಯೇ ಸಮೀಪದಲ್ಲಿ ಶ್ವಾನವೊಂದರ ತಲೆಗೆ ಪ್ಲಾಸ್ಟಿಕ್ ಬಾಟಲಿವೊಂದು ಸಿಲುಕಿಕೊಂಡು ಪರಿತಪಿಸುತ್ತಿತ್ತು, ಅದನ್ನು ನೋಡಿದ ಕೊರ್ಗಿ ವಿಠಲ್ ಶೆಟ್ಟಿ ಅವರು ತತ್ಕ್ಷಣವೇ ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳ ಗಮನಕ್ಕೆ ತಂದರು. ಮೂಕ ಪ್ರಾಣಿಯೊಂದು ಕಳೆದ ಮೂರು ದಿನಗಳಿಂದಲೂ ಆಹಾರ ನೀರು ಇಲ್ಲದೇ ಪರಿತಪಿಸುತ್ತಿರುವುದನ್ನು ಕಂಡು ಮರುಗಿದ ಅಗ್ನಿಶಾಮಕ ದಳದ ಸಿಬಂದಿಗಳಾದ ನಾಗರಾಜ್ ಪೂಜಾರಿ, ರವೀಂದ್ರ ದೇವಾಡಿಗ, ಚಂದ್ರಕಾಂತ್ ನಾಯ್ಕ, ಬಸವರಾಜ್ ತಂಡ ಶ್ವಾನದ ಪ್ರಾಣ ರಕ್ಷಣೆಗಾಗಿ ಮುಂದಾದರು.
ಮೊದಲು ಶ್ವಾನದ ರಕ್ಷಣೆಗಾಗಿ ಬಲೆ ಬೀಸಿ ಸುತ್ತುವರಿದರಾದರೂ ಕೂಡಾ ಶ್ವಾನ ತನ್ನ ಜೀವ ಭಯದಿಂದ ಓಡಲು ಆರಂಭಿಸಿದೆ. ಒಟ್ಟಿನಲ್ಲಿ ಅಗ್ನಿಶಾಮಕ ದಳದ ಸಿಬಂದಿಗಳ ಸಮಯಪ್ರಜ್ಞೆ ಹಾಗೂ ಕಾರ್ಯತತ್ಪರತೆಯಿಂದಾಗಿ ಶ್ವಾನದ ಪ್ರಾಣವನ್ನು ರಕ್ಷಿಸಲು ನಡೆದ ಪ್ರಯತ್ನ ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.