ಬಾಗಲಕೋಟೆ: ರಾಜ್ಯ ಸರ್ಕಾರ ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿಗಾಗಿ ಪ್ರತ್ಯೇಕ ಆಯೋಗ ರಚನೆ ಮಾಡಲು ಮುಂದಾಗಿರುವುದು ಸಂವಿಧಾನ ಬಾಹೀರವಾಗಿದೆ. ಚುನಾವಣೆ ಆಯೋಗದ ಅಧಿಕಾರದ ವ್ಯಾಪ್ತಿ ಮೊಟಕುಗೊಳಿಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಘಾತ ಎಂದು ಕಾಂಗ್ರೆಸ್ ಪಕ್ಷದ ರಾಜೀವಗಾಂಧಿ ಗ್ರಾಮೀಣ ಅಭಿವೃಧಿ ಹಾಗೂ ಪಂಚಾಯತ್ ರಾಜ್ ಸಂಘಟನೆಯ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಾರಾಯಣಸ್ವಾಮಿ ಆರೋಪಿಸಿದರು.
ಈ ವರೆಗೆ ಚುನಾವಣೆ ಆಯೋಗವು ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಪ್ರಭುತ್ವ ಹೊಂದಿತ್ತು. ಪ್ರತ್ಯೇಕ ಆಯೋಗ ರಚನೆ ಮಾಡಿ, ಅದಕ್ಕೆ ಸರ್ಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉನ್ನತ ಅಧಿಕಾರಿಗಳನ್ನು ನೇಮಕ ಮಾಡುವ ಆಲೋಚನೆ ಹೊಂದಿದೆ. ಇದರಿಂದ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಆಡಳಿತ ಪಕ್ಷದ ಹಸ್ತಕ್ಷೇಪ ಹೆಚ್ಚಾಗುತ್ತದೆ. ನ್ಯಾಯಸಮ್ಮತ, ಸಮಾಜಿಕ ನ್ಯಾಯ ಪರಿಪಾಲನೆ ಆಗುವುದು ಅನುಮಾನ. ಸರ್ಕಾರದ ಈ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕ ಪಂಚಾಯತ ಕ್ಷೇತ್ರ ವಿಂಗಡಣೆ, ಮೀಸಲಾತಿ ಸಂಬOಧ ಯಾವುದೇ ಆಕ್ಷೇಪಣಾ ಅರ್ಜಿಗಳು ಈಗ ನ್ಯಾಯಾಲಯ ಮುಂದೆ ಇಲ್ಲ. ಹೀಗಾಗಿ ಸರ್ಕಾರ ಕೂಡಲೇ ಚುನಾವಣೆ ಘೋಷಣೆ ಮಾಡಬೇಕು. ರಾಜ್ಯದಲ್ಲಿ ಬರುವ ಡಿಸೆಂಬರ್ಗೆ 25 ವಿಧಾನ ಪರಿಷತ್ತಿನ ಸ್ಥಾನಗಳ ಅವಧಿ ಮುಕ್ತಾಯವಾಗಲಿದೆ. ಚುನಾವಣೆಗೆ ಜಿಪಂ,ತಾಪO ಪ್ರತಿನಿಧಿಗಳು ಮತ ಚಲಾಯಿಸುವಂತೆ ಅವಕಾಶ ಸಿಗಬೇಕು. ಆಯೋಗ ರಚನೆ ಮೂಲಕ ಚುನಾವಣೆ ಮುಂದೂಡುವ ತಂತ್ರಗಾರಿಕೆ ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವುದು ತರವಲ್ಲ ಎಂದರು.