ಬೆಂಗಳೂರು(ಮಾ.25) : ಕೊರೋನಾ ಭೀತಿಯ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಮಾಡಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ ಜನರನ್ನು ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ.
ಕರ್ಪ್ಯೂ ಇರುವುದರಿಂದ ಪೊಲೀಸರು ತೀವ್ರ ಕಟ್ಟೆಚ್ಚರವನ್ನು ವಹಿಸಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 14 ಸಾವಿರ ಜನರನ್ನು ಬಿಬಿಎಂಪಿ ಸಿಬ್ಬಂದಿಗಳು ಹಾಗೂ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಫೆಬ್ರವರಿ 13 ರಿಂದ ಮಾರ್ಚ್ 19ರ ಅವಧಿಯಲ್ಲಿ ಬಂದಿದ್ದವರಿಗೆ ಸ್ಟಾಂಪಿಂಗ್ ಮಾಡಲಾಗಿದೆ.
ಇವರೆಲ್ಲರು ಬಿಬಿಎಂಪಿ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಉಳಿದುಕೊಂಡಿದ್ದರು. ಕಳೆದ ಶನಿವಾರದಿಂದ ಡಿಸಿಪಿ ಇಶಾ ಪಂತ್ ನೇತೃತ್ವದ ತಂಡದಿಂದ ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಪತ್ತೆ ಕಾರ್ಯ ಆರಂಭಿಸಿದ್ದರು.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸ್ ಹಾಗೂ ಬಿಬಿಎಂಪಿ ಸಿಬ್ಬಂದಿ ಪತ್ತೆ ಮಾಡಿದವರ ಹೋಂ ಕ್ವಾರೆಂಟೈನ್ ಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹೋಂ ಕ್ವಾರೆಂಟೈನ್ ಗಳ ಹೆಸರು, ವಿಳಾಸ, ವಾಪಸ್ ಬಂದಿದ್ದ ದೇಶ ಸೇರಿ ಹಲವು ವಿವರ ನಮೂದು ಮಾಡಲಾಗಿದೆ. ಸದ್ಯ ಇನ್ನುಳಿದವರ ಪತ್ತೆಗೆ ಮುಂದಾಗಿದ್ದಾರೆ.
ಹೋಂ ಕ್ವಾರೆಂಟೈನ್ ಗಳ ಮೇಲೆ ನಿಗಾ ಇಡಲು ಬೀಟ್ ಪೊಲೀಸರಿಗೆ ಖಡಕ್ ಸೂಚನೆ ನೀಡಲಾಗಿದ್ದು. ಇವರೆಲ್ಲರು 14 ದಿನಗಳು ಮನೆಯಿಂದ ಹೊರಬಾರದಂತೆ ಹದ್ದಿನ ಕಣ್ಣಿಡಲಾಗಿದೆ.
ಕೊರೋನಾ ಶಂಕಿತರಿಗೆ ಗೃಹ ದಿಗ್ಬಂಧನದಲ್ಲಿರಲು ಆದೇಶ ನೀಡಲಾಗಿದೆ. ಅವರು ಹೊರಗೆ ಬರಬಹುದು ಎಂಬ ಕಾರಣಕ್ಕೆ ಹೋಮ್ ಕ್ವಾರಂಟೈನ್ನಲ್ಲಿರುವವರ ಕೈ ಮೇಲೆ ಸೀಲ್ ಹಾಕಲಾಗಿದೆ. ಆದರೂ ಸೀಲ್ ಇರುವ ವ್ಯಕ್ತಿಗಳು ಹೊರಗೆ ಓಡಾಡುತ್ತಿರುವುದರಿಂದ ಅಂಥವರ ಮೇಲೆ ಪ್ರಕರಣದ ದಾಖಲಿಸಲಾಗುತ್ತಿದೆ.43 ಸಾವಿರ ಜನರು ಹೊರದೇಶಗಳಿಂದ ಕರ್ನಾಟಕಕ್ಕೆ ಬಂದಿದ್ದಾರೆ. ಅವರಲ್ಲಿ 23 ಸಾವಿರ ಜನರು ಇನ್ನೂ ಪತ್ತೆಯಾಗಬೇಕಾಗಿದ್ದು, ಅವರನ್ನೆಲ್ಲಾ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಬೇಕು ಎಂದು ವಿಧಾನ ಸೌಧ ಅಧಿವೇಶನ ಸಮಯದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದರು.