ನವದೆಹಲಿ/ಮುಂಬೈ,ಏ.21- ದೇಶಾದ್ಯಂತ ಕೋವಿಡ್-19 ವೈರಸ್ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಂಗೆಡಿಸಿದೆ. ಭಾರತದಲ್ಲಿ ಮೃತರ ಸಂಖ್ಯೆ 590ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 18,600ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.
ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ರಾತ್ರಿವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 590 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ 18,601ಕ್ಕೇರಿದೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 14,759 ಈವರೆಗೆ 3,251 ಮಂದಿ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ.
ಇಂದು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಮಧ್ಯರಾತ್ರಿವರೆಗಿನ ಮಾಹಿತಿ ಪ್ರಕಾರ ಒಟ್ಟು 32 ಸಾವುಗಳು ಸಂಭವಿಸಿದೆ. ರಾಜಸ್ತಾನ-11, ಮಹಾರಾಸ್ಟ್ರದಲ್ಲಿ 9, ಗುಜರಾತ್ 4, ದೆಹಲಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ತಲಾ ಇಬ್ಬರು ಹಾಗೂ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ.
ಈವರೆಗೆ ಸಂಭವಿಸಿರುವ 590 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಒಟ್ಟು 232 ಸಾವುಗಳು ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (74), ಗುಜರಾತ್ (71), ದೆಹಲಿ (47), ರಾಜಸ್ತಾನ(25), ತೆಲಂಗಾಣ(23), ಆಂಧ್ರಪ್ರದೇಶ (20), ಉತ್ತರ ಪ್ರದೇಶ (18), ಕರ್ನಾಟಕ (17), ತಮಿಳುನಾಡು (17), ಪಂಜಾಬ್ (16), ಪಶ್ಚಿಮ ಬಂಗಾಳದಲ್ಲಿ (12), ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಕೇರಳ ಮತ್ತು ಹರಿಯಾಣ ತಲಾ ಮೂರು, ಜಾರ್ಖಂಡ್ ಮತ್ತು ಬಿಹಾರ ತಲಾ ಎರಡು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.
ಮತ್ತೊಂದು ಮೂಲಗಳ ಪ್ರಕಾರ ಈವರೆಗೆ ದೇಶದ ವಿವಿಧೆಡೆ 600 ಸಾವುಗಳು ಸಂಭವಿಸಿವೆ. ಇನ್ನು ಹಲವು ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ 19 ನರ್ಸ್ಗಳೂ ಸೇರಿದಂತೆ 25 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್-19 ಸೋಂಕು ತಗುಲಿದೆ.
ರಾಜಸ್ತಾನದಲ್ಲಿ ಹೊಸದಾಗಿ 52 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬಾಧಿತರ ಸಂಖ್ಯೆ 1,623ಕ್ಕೇರಿದೆ.