ಹಾವೇರಿ: ಕೊರೊನಾ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಮೋದಿ ಸಹ ಎಲ್ಲ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೂ ಇಲ್ಲೊಬ್ಬ ಯುವಕ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದರ್ಪ ತೋರಿದ್ದಾನೆ.
ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಯುವಕ ಪ್ರಕಾಶ್ ಕರಿಗಾರ(35) ಪೇದೆ ಮೇಲೆ ಹಲ್ಲೆ ಮಾಡಿದ್ದು, ಬಸಾಪುರ ಗ್ರಾಮದಲ್ಲಿ ಕರ್ತವ್ಯದ ಮೇಲಿದ್ದ ಕಾನಸ್ಟೇಬಲ್ ಗುರುರಾಜ್ ಮೈಲಾರ ಅವರು ಅನಗತ್ಯವಾಗಿ ಮನೆಯಿಂದ ಹೊರಗೆ ತಿರುಗಾಡದಂತೆ ಯುವಕ ಪ್ರಕಾಶನಿಗೆ ಹೇಳಿದ್ದಾರೆ. ಇದರಿಂದ ಕೋಪಿತನಾದ ಯುವಕ, ಕಾನಸ್ಟೇಬಲ್ ಗುರುರಾಜ ಮೇಲೆ ಹಲ್ಲೆ ಮಾಡಿದ್ದಾನೆ.
ಪೊಲೀಸ್ ಕಾನಸ್ಟೇಬಲ್ ಮೇಲೆ ಹಲ್ಲೆ ಮಾಡಿದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಐ ಎಂ.ಕೆ.ಸೊರಟೂರ ಅವರನ್ನು ಸಹ ಕಾಲಿನಿಂದ ಒದ್ದು ಪ್ರಕಾಶ್ ದರ್ಪ ತೋರಿದ್ದಾನೆ. ನಂತರ ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರ ನೆರವಿನಿಂದ ಪ್ರಕಾಶನನ್ನ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.