ಬೆಂಗಳೂರು: ಲಾಕ್ಡೌನ್ನಿಂದಾಗಿ 22 ದಿನಗಳಿಂದ ರಾಜ್ಯದೆಲ್ಲೆಡೆ ಮಾಲ್, ಬಾರ್, ಪಬ್ಗಳನ್ನು ಮುಚ್ಚಲಾಗಿತ್ತು. ಆದರೆ ಇದೀಗ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಡುವ ಸಾಧ್ಯತೆಯಿದೆ.
ಲಾಕ್ಡೌನ್ ಅನ್ನು ಏ. 30ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ನಂತರ ಇನ್ನೂ 18 ದಿನ ಸಾರಾಯಿ ಸಿಗುವುದಿಲ್ಲ ಎಂಬ ನಿರಾಸೆ ಮದ್ಯಪ್ರಿಯರನ್ನು ಕಾಡಿತ್ತು. ಆದರೆ, ಈ ಬಗ್ಗೆ ಸದ್ಯದಲ್ಲೇ ಘೋಷಿಸಲಿರುವ ರಾಜ್ಯ ಸರ್ಕಾರ ಬುಧವಾರದಿಂದಲೇ ಸಾರಾಯಿ ಮಾರಾಟಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ.ರಾಜ್ಯದಲ್ಲಿ ಹದಗೆಟ್ಟಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಈ ಹೆಜ್ಜೆಯನ್ನು ತೆಗೆದುಕೊಳ್ಳಲಾತ್ತಿದೆ.
ನಾಳೆ ಅಂಬೇಡ್ಕರ್ ಜಯಂತಿ ಇರುವುದರಿಂದ ನಾಡಿದ್ದು ಅಂದರೆ ಬುಧವಾರದಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಎಂಎಸ್ಐಎಲ್ ಮೂಲಕ ಮದ್ಯ ಮಾರಾಟ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಸುಳಿವು ನೀಡಿದ್ದಾರೆ.
ಏಪ್ರಿಲ್ 14ರ ನಂತರ ಮದ್ಯ ಮಾರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದಿರುವ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಏಪ್ರಿಲ್ 15ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ, ಬುಧವಾರದಿಂದಲೇ ಮದ್ಯ ಮಾರಾಟ ಖಚಿತ ಎನ್ನಲಾಗಿದೆ.