ಬೆಂಗಳೂರು: ದೇವಸ್ಥಾನಗಳಲ್ಲಿ ರಾಮನವಮಿ ಸಂಭ್ರಮ, ಮಜ್ಜಿಗೆ, ಪಾನಕ, ಕೋಸಂಬರಿ ಘಮ ಘಮಿಸುತ್ತಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಎಲ್ಲ ದೇವಸ್ಥಾನಗಳಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ರಾಮನವಮಿ ಆಚರಿಸಲಾಗುತ್ತಿದೆ.ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧೆಡೆಗಳಲ್ಲಿ ರಾಮನವಮಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಪೂಜೆಗೆ ಮಾತ್ರ ರಾಮನವಮಿ ಸೀಮಿತವಾಗಿದ್ದು, ಎಲ್ಲ ರಾಮ ಮಂದಿರಗಳಲ್ಲೂ ಸರಳವಾಗಿ ರಾಮನವಮಿ ಆಚರಿಸಲಾಗುತ್ತಿದೆ. ಮಂದಿರ ಸ್ವಚ್ಛಗೊಳಿಸಿ ಪೂಜೆ ಮಾಡಲಾಗುತ್ತಿದೆ. ಆದರೆ ಮಜ್ಜಿಗೆ, ಪಾನಕ, ಕೋಸಂಬರಿಗೆ ಬ್ರೇಕ್ ಹಾಕಲಾಗಿದೆ. ಕೇವಲ ದೇವಸ್ಥಾನದವರು ಮಾತ್ರ ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ. ಪೂಜೆಯಲ್ಲಿ ಭಾಗವಹಿಸದಂತೆ ಸಾರ್ವಜನಿಕರಿಗೂ ನಿರ್ಬಂಧ ಹೇರಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಪ್ರತಿ ವರ್ಷ ಹಲವು ದೇವಸ್ಥಾನಗಳಲ್ಲಿ ರಾಮನವಮಿಯನ್ನು ಭರ್ಜರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಕೊರೊನಾ ಭಿತಿ ಹಿನ್ನೆಲೆ ಎಲ್ಲವೂ ಸ್ತಬ್ಧವಾಗಿದ್ದು, ಶ್ರೀರಾಮನವಮಿ ಹಿನ್ನೆಲೆಯಲ್ಲಿ ಸದಾ ಕಳೆಕಟ್ಟುತ್ತಿದ್ದ ವೀರಾಂಜನೇಯ ದೇವಾಲಯ ಕೊರೋನಾ ವೈರೆಸ್ ಎಫೆಕ್ಟ್ ನಿಂದಾಗಿ ಬಂದ್ ಆಗಿದೆ. ಪೂಜೆ, ಪ್ರಸಾದ, ಮಜ್ಜಿಗೆ, ಪಾನಕ ಹಂಚಿಕೆಗೆ ಬ್ರೇಕ್ ಬಿದ್ದಿದೆ. ನಗರದ ಹಲವು ದೇವಾಲಯಗಳಲ್ಲಿ ಸರಳವಾಗಿ ರಾಮನವಮಿ ಆಚರಿಸಲಾಗುತ್ತಿದ್ದು, ಸರಳವಾಗಿ ಪೂಜೆ ಮಾತ್ರ ಮಾಡಲಾಗುತ್ತಿದೆ.