ಕರೋನಾ : ಸರ್ಕಾರದ ಆದೇಶಕ್ಕೂ ಕ್ಯಾರೇ ಅನ್ನದ ಧನದಾಹಿ ಶಿಕ್ಷಣ ಸಂಸ್ಥೆಗಳು..!
ಬೆಂಗಳೂರು, ಮಾ.14- ಇಡೀ ರಾಜ್ಯವೇ ಕೊರೊನಾ ಭೀತಿ ಆತಂಕ ಎದುರಿಸುತ್ತಿದೆ. ಆದರೆ, ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶುಲ್ಕ ವಸೂಲಿಯಲ್ಲಿ ತೊಡಗಿವೆ. 1 ರಿಂದ 6ನೆ ತರಗತಿವರೆಗೆ ಬೇಸಿಗೆ ರಜೆ ಘೋಷಣೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನೂ ಪರೀಕ್ಷೆ ನಡೆದಿರಲಿಲ್ಲ. ಪ್ರವೇಶ ಪತ್ರ ಕೊಡುವ ನೆಪದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಈ ಆದೇಶದಿಂದ ಅನಾನುಕೂಲವಾಗಿದೆ.
ಹಾಗಾಗಿ ಕೆಲವೆಡೆ ರಜೆಯನ್ನೂ ಘೋಷಿಸದೆ ಶಾಲೆಗೆ ಬರುವಂತೆ ಸೂಚಿಸಿರುವ ಘಟನೆಗಳು ಕಂಡುಬಂದಿವೆ. ಮುಂದಿನ ತರಗತಿಗೆ ಬಡ್ತಿ ನೀಡಬೇಕಾದರೆ ಎಲ್ಲ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹಲವು ಶಾಲೆಗಳ ಮುಖ್ಯಸ್ಥರು ಪೋಷಕರಿಗೆ ಮೆಸೇಜ್ ರವಾನಿಸಿದ್ದಾರೆ.
ಈಗಾಗಲೇ 1 ರಿಂದ 6ರ ವರೆಗೆ ಈ ಹಿಂದೆ ನಡೆದ ಟೆಸ್ಟ್ಗಳನ್ನು ಆಧರಿಸಿ ಫಲಿತಾಂಶ ನೀಡಬೇಕೆಂದು ಸರ್ಕಾರ ಆದೇಶಿಸಿದ್ದರೂ ಹಲವೆಡೆ ಸರ್ಕಾರದ ಆದೇಶವನ್ನೂ ಲೆಕ್ಕಿಸದೆ 6ನೆ ತರಗತಿಯ ಮಕ್ಕಳಿಗೂ ಪರೀಕ್ಷೆ ನಡೆಸುತ್ತಿರುವುದು ಕಂಡುಬಂದಿದೆ. ಇದು ಶುಲ್ಕ ವಸೂಲಿ ದಂಧೆಯ ಕರಾಳ ಮುಖವಾಡವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.