ನವದೆಹಲಿ/ಇಸ್ಲಾಮಾಬಾದ್, ಜೂ.1- ಬೇಹುಗಾರಿಕೆ ಆರೋಪದ ಮೇಲೆ ನವದೆಹಲಿಯಲ್ಲಿ ಇರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಗಡಿಪಾರು ಮಾಡಿದೆ.
ಇದರ ಬೆನ್ನಲ್ಲೇ ಗೂಡಾಚಾರಿಕೆ ಆರೋಪವನ್ನು ತಳ್ಳಿ ಹಾಕಿರುವ ಪಾಕಿಸ್ತಾನ ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈಕಮೀಷನರ್ ಕಚೇರಿಯ ಉನ್ನತ ಅಧಿಕಾರಿಗೆ ಸಮನ್ಸ್ ಜಾರಿಗೊಳಿಸಿದೆ.
ಇದು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿದೆ. ಭಾರತದಲ್ಲಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯ ವೀಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಬ್ ಹುಸೇನ್ ಮತ್ತು ಮೊಹಮ್ಮದ್ ಜಾಹೀರ್ ಎಂಬ ಇಬ್ಬರು ಅಧಿಕಾರಿಗಳನ್ನು ಬಂಧಿಸಿ ಪಾಕಿಸ್ತಾನಕ್ಕೆ ತಕ್ಷಣ ತೆರಳುವಂತೆ ತಿಳಿಸಲಾಗಿದೆ.
ಸ್ಥಳೀಯ ವ್ಯಕ್ತಿಯೊಬ್ಬರಿಂದ ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ರಹಸ್ಯ ಮಾಹಿತಿಗಳನ್ನು ಇವರಿಬ್ಬರು ಪಡೆಯುತ್ತಿದ್ದಾಗ ಸಾಕ್ಷಾಧಾರ ಸಮೇತ ಸಿಕ್ಕಿಬಿದ್ದರು. ಪಾಕಿಸ್ತಾನದ ಈ ಅಧಿಕಾರಿಗಳು ಭಾರತದ ವ್ಯಕ್ತಿಗೆ ನಗದು ಮತ್ತು ಐಪೋನ್ನನ್ನು ಪ್ರತಿಫಲವಾಗಿ ನೀಡಿ ರಹಸ್ಯ ಮಾಹಿತಿ ಪಡೆಯುತ್ತಿದ್ದಾಗ ಬಂಧಿಸಲಾಯಿತು.
ಇವರಿಬ್ಬರು ತಾವು ಭಾರತೀಯರು ಎಂದು ವಾದಿಸಿ ಆಧಾರ್ಕಾರ್ಡ್ ತೋರಿಸಿದ್ದರು. ಆದರೆ ಅವು ನಕಲಿ ಎಂಬುದು ಸಾಬೀತಾಗಿ ತಕ್ಷಣ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಗಡಿಪಾರಿಗೆ ಆದೇಶ ನೀಡಲಾಗಿದೆ.
ಪಾಕಿಸ್ತಾನದಿಂದ ಸಮನ್ಸ್: ಅತ್ತ ಇಸ್ಲಾಮಾಬಾದ್ನಲ್ಲಿ ಈ ಘಟನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಅಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸಮನ್ಸ್ ಜಾರಿಗೊಳಿಸಿ ಆರೋಪವನ್ನು ಅಲ್ಲಗೆಳೆದಿದೆ.