ಬಾಗಲಕೋಟೆ: ಒಂದೇ ದಿನ 3 ವಿವಿಧ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಜಿಲ್ಲಾ ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 1 ಸಾವಿರ ಲೀಟರ್ ಗೂ ಅಧಿಕ ಕಳ್ಳಬಟ್ಟಿ ನಾಶಪಡಿಸಿದ್ದಾರೆ.
ತಾಲೂಕಿನ ನಾಯನೇಗಲಿ, ಸೀತಿಮನಿ ತಾಂಡಾದಲ್ಲಿನ ಅಡ್ಡೆಗಳ ಮೇಲೆ ದಾಳಿ ವೇಳೆ 800 ಲೀಟರ್ ಬೆಲ್ಲದ ಕೊಳೆ, ಬೀಳಗಿ ತಾಲೂಕಿನ ಬಿಸನಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು 200 ಲೀಟರ್ ಬೆಲ್ಲದ ಕೊಳೆ ಪತ್ತೆಯಾಗಿದೆ. ಒಟ್ಟು ಸುಮಾರು 1 ಸಾವಿರ ಲೀಟರ್ ಬೆಲ್ಲದ ಕೊಳೆಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.
ದಂಧೆಕೋರರು ನೀರಿನ ಬಿಂದಿಗೆಗಳಲ್ಲಿ ಹೂತಿಟ್ಟ ಕೊಳೆಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ಕಳ್ಳಬಟ್ಟಿ ಸಾಗಿಸುತ್ತಿದ್ದ ಇಬ್ಬರನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಓರ್ವ ಪರಾರಿಯಾಗಿದ್ದು, ಪರಾರಿಯಾಗಲು ಬಳಸಿದ್ದ ಮೂರು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.