ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಹಿನ್ನೆಲೆ ಮೇ 3ರವರೆಗೆ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆ ಬಳಿಕ ಕೇಂದ್ರ ಸರ್ಕಾರವು ಲಾಕ್ಡೌನ್ ನಿರ್ಧಾರವನ್ನು ರಾಜ್ಯಗಳಿಗೆ ಬಿಟ್ಟರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ನಡೆ ಏನು ಎಂಬ ಚರ್ಚೆ ಶುರುವಾಗಿದೆ.
ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಡಿಸಿಗಳ ಸಲಹೆ ಏನು?
ಲಾಕ್ಡೌನ್ ಸಡಿಲಿಕೆಗೆ ಬಹುತೇಕ ಜಿಲ್ಲಾಧಿಕಾರಿಗಳಿಂದ 50:50 ಅಭಿಪ್ರಾಯ ವ್ಯಕ್ತವಾಗಿದೆ. ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಷರತ್ತಿನ ಸಡಿಲಿಕೆಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ. ರೆಡ್, ಆರೆಂಜ್, ಯೆಲ್ಲೋ ಜಿಲ್ಲೆಗಳ ಡಿಸಿಗಳು ಸಡಿಲಿಕೆಗೆ ಸಮ್ಮತಿ ಸೂಚಿಸಿಲ್ಲ. ಲಾಕ್ಡೌನ್ ಸಡಿಲಿಸಿದರೆ ಅಪಾಯ ಆಹ್ವಾನಿಸಿದಂತೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಲಾಕ್ಡೌನ್ಗೆ ಬಿಎಸ್ವೈ ಮಂತ್ರ:
ಮುಖ್ಯಕಾರ್ಯದರ್ಶಿ ಅವರು ಎಲ್ಲಾ ಜಿಲ್ಲಾಧಿಕಾರಿಗಗಳ ಅಭಿಪ್ರಾಯದ ವರದಿ ಸಿದ್ಧಪಡಿಸುತ್ತಿದ್ದಾರೆ. ಸಿಎಸ್ ವರದಿ ನಂತರ ಸಂಪುಟದಲ್ಲಿ ಸಿಎಂ ಬಿಎಸ್ವೈ ಚರ್ಚೆ ಮಾಡಲಿದ್ದಾರೆ. ಬಹುತೇಕ ಲಾಕ್ಡೌನ್ ಮುಂದುವರಿಕೆಗೆ ಸಿಎಂ ಒಲವು ಎನ್ನಲಾಗುತ್ತಿದೆ
ಗ್ರೀನ್ ಝೋನ್ಗಳಲ್ಲಿ ಸದ್ಯಕ್ಕಿಂತ ಪರಿಸ್ಥಿತಿ ಸುಧಾರಿಸಿದರೆ ಷರತ್ತಿನ ಸಡಿಲಿಕೆಗೆ ಚಿಂತನೆ ನಡೆದಿದೆ. ಇತ್ತ ರೆಡ್, ಯೆಲ್ಲೋ, ಆರೆಂಜ್ ಝೋನ್ಗಳಲ್ಲಿ ಸಡಿಲಿಕೆ ಕೊಡದಿರಲು ತೀರ್ಮಾನವನ್ನು ಸಿಎಂ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.