“ಬರೋಬ್ಬರಿ ಆರು ದಶಕಗಳ ಸುದೀರ್ಘ ಕಾಯುವಿಕೆಗೆ ಇಂದು ತೆರೆ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಬೆಕ್ಕಿನಕೆರೆ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಐತಿಹಾಸಿಕ ಜಾತ್ರೆ ಭಕ್ತಿ-ಭಾವದೊಂದಿಗೆ ಜರುಗುತ್ತಿದೆ. ಅಜ್ಜಂದಿರ ಕಾಲದ ಸಂಕಲ್ಪವನ್ನು ಮೊಮ್ಮಕ್ಕಳ ಪೀಳಿಗೆ ಈಡೇರಿಸುತ್ತಿದ್ದು, ಮೂರನೇ ದಿನವಾದ ಇಂದು ದೇವಿಯ ದರ್ಶನಕ್ಕೆ ಭಕ್ತ ಸಮೂಹವೇ ಲಗ್ಗೆ ಇಟ್ಟಿದೆ.”
ಬೆಳಗಾವಿ ನಗರದ ಸಮೀಪವಿರುವ ಬೆಕ್ಕಿನಕೆರೆ ಗ್ರಾಮದಲ್ಲಿ ಸದ್ಯ ಸಂಭ್ರಮ ಮುಗಿಲು ಮುಟ್ಟಿದೆ. ಬರೋಬ್ಬರಿ 66 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರದ ವಿಶೇಷ ದಿನದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಹಿಂದೆ ನೀರಿನ ಅಭಾವ ಹಾಗೂ ವಿವಿಧ ಕಾರಣಗಳಿಂದಾಗಿ ಎರಡು ಪೀಳಿಗೆಯವರು ಈ ಜಾತ್ರೆಯನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಗ್ರಾಮಸ್ಥರೆಲ್ಲರೂ ಒಂದಾಗಿ, ಅಜ್ಜಂದಿರ ಕಾಲದ ಸಂಕಲ್ಪವನ್ನು ಈಡೇರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬೈಟ್
ಭಕ್ತರ ದಟ್ಟಣೆ ನಿಯಂತ್ರಿಸಲು ಗ್ರಾಮದ ಹೊರವಲಯದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಬೆಸ್ಕಾಂ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತು ‘ಇನ್ ನ್ಯೂಸ್’ ಜೊತೆ ಮಾತನಾಡಿದ ಡಾ. ನಿತೀನ್ ರಾಜ ಗೋಳಕರ್ ಅವರು, “ನಮ್ಮ ಹಿಂದಿನ ಎರಡು ಪೀಳಿಗೆಯವರು ಕಂಡಿದ್ದ ಕನಸು ಇಂದು ನನಸಾಗಿದೆ. ನೀರಿನ ಸಮಸ್ಯೆ ಹಿನ್ನೆಲೆ ನಿಂತುಹೋಗಿದ್ದ ಜಾತ್ರೆಯನ್ನು ಈಗಿನ ಯುವ ಪೀಳಿಗೆ ಅತ್ಯಂತ ಶ್ರದ್ಧೆಯಿಂದ ಆಯೋಜಿಸಿದೆ” ಎಂದು ಸಂತಸ ಹಂಚಿಕೊಂಡರು. ಒಟ್ಟಾರೆ ಬೆಕಿನಕೆರೆ ಗ್ರಾಮವು ಇಂದು ಭಕ್ತರ ಹರ್ಷೋದ್ಗಾರ ಹಾಗೂ ದೇವಿಯ ನಾಮಸ್ಮರಣೆಯಿಂದ ಕಂಗೊಳಿಸುತ್ತಿದೆ.
Laxmi News 24×7