Breaking News

ಭವ್ಯ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ: ರೈತ ಮುಖಂಡ ಶಶಿಕಾಂತ್ ಗುರೂಜಿ

Spread the love

ಕಾಗವಾಡ:”ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬಿನ ದರಕ್ಕಾಗಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಹಳಿಂಗಳಿಯ ಜೈನಮಠದ ಪರಮಪೂಜ್ಯ ಕುಲಭೂಷಣ ಮುನಿ ಮಹಾರಾಜರ ಆಶೀರ್ವಾದವೇ ಶ್ರೀರಕ್ಷೆಯಾಯಿತು. ನಾನು ಅವರ ಆಶೀರ್ವಾದ ಪಡೆಯಲು ಹೋದಾಗ, ‘ನಿನ್ನಿಂದ ನಾಡಿನ ಸೇವೆಯಾಗಲಿದೆ’ ಎಂದು ಅವರು ಹರಸಿದ್ದರು. ಅದರ ಫಲಶೃತಿಯಾಗಿಯೇ ಇಂದು ರೈತರ ಹೋರಾಟ ಯಶಸ್ವಿಯಾಗಿದೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಹೇಳಿದರು.

ಶೇಡಬಾಳದ ಆಚಾರ್ಯ ಶಾಂತಿಸಾಗರ ಜೈನ ಆಶ್ರಮದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶಾಂತಿಸಾಗರ ಪ್ರಾಥಮಿಕ, ಪ್ರೌಢ ಹಾಗೂ ವಸತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು, “ಪ್ರಥಮಾಚಾರ್ಯ ಶಾಂತಿಸಾಗರ ಮಹಾರಾಜರು ಸ್ಥಾಪಿಸಿದ ಈ ಆಶ್ರಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ದೇಶಾದ್ಯಂತ ಸಂಸ್ಥೆಗೆ ಕೀರ್ತಿ ತರುತ್ತಾರೆ ಎಂಬ ವಿಶ್ವಾಸ ನನಗಿದೆ. ಜೈನ ಮುನಿ ಕುಲಭೂಷಣ ಮಹಾರಾಜರು ಗುರ್ಲಾಪುರ ಕ್ರಾಸ್‌ನ ಹೋರಾಟಕ್ಕೆ ಆಹಾರಕ್ಕಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಲ್ಲದೆ, ಹೋರಾಟದ ಯಶಸ್ಸಿಗಾಗಿ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇಂತಹ ತ್ಯಾಗಮಯ ಧರ್ಮದ ಅಡಿಯಲ್ಲಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗುತ್ತಿರುವುದು ಹೆಮ್ಮೆಯ ವಿಷಯ,” ಎಂದರು.

ಅಂಬೇಡ್ಕರ್ ಅವರ ಕರ್ತವ್ಯನಿಷ್ಠೆ ಸ್ಮರಿಸಿದ ಗುರೂಜಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದ ಮನಕಲುಕುವ ಘಟನೆಯನ್ನು ಉದಾಹರಿಸಿದ ಅವರು, “ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾಗ ಅಂಬೇಡ್ಕರ್ ಅವರಿಗೆ ಪತ್ನಿಯ ನಿಧನದ ಸುದ್ದಿ ತಿಳಿಸುವ ಚೀಟಿ ಬಂದರೂ, ಅವರು ಕಿಂಚಿತ್ತೂ ಎದೆಗುಂದದೆ ವಾದ ಮುಂದುವರಿಸಿದರು. ಬ್ರಿಟಿಷ್ ವಕೀಲರು ಇದರ ಬಗ್ಗೆ ವಿಚಾರಿಸಿದಾಗ, ‘ಇಲ್ಲಿ 47 ಹೋರಾಟಗಾರರ ಜೀವದ ಪ್ರಶ್ನೆಯಿದೆ. ನಾನು ಹೋದರೆ ಅವರಿಗೆ ಗಲ್ಲು ಶಿಕ್ಷೆಯಾಗಬಹುದು. ನನ್ನ ಪತ್ನಿ ಮರಳಿ ಬರಲಾರರು, ಆದರೆ ಈ ಜೀವಗಳನ್ನು ಉಳಿಸುವುದು ನನ್ನ ಕರ್ತವ್ಯ’ ಎಂದು ಉತ್ತರಿಸಿದ್ದರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಹಾಗೂ ಕರ್ತವ್ಯಪ್ರಜ್ಞೆಯನ್ನು ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸಿಕೊಡಬೇಕು,” ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ವರ್ಷಪೂರ್ತಿ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೆಳಗಾವಿ ಅಲ್ಪಸಂಖ್ಯಾತರ ಇಲಾಖೆಯ ಪ್ರಥಮ ದರ್ಜೆ ಸಹಾಯಕ ರಾಜು ಖೆಮ್ಲಾಪುರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾರ್ಗದರ್ಶನ ನೀಡಿದರು.

ವೇದಿಕೆಯ ಮೇಲೆ ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ್ ಬರಗಾಲೆ, ಶೇಡಬಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ಕಿರಣ ಯಂದಗೌಡರ, ಶುಭಂ ಪಾಟೀಲ, ಜಿನ್ನಪ್ಪಾ ನಾಂದನಿ, ಸುದರ್ಶನ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಚೇತನ್ ನಾಂದ್ರೆ ಸ್ವಾಗತಿಸಿ, ವಂದಿಸಿದರು.


Spread the love

About Laxminews 24x7

Check Also

ವಿದ್ಯೆಯ ಜೊತೆಗೆ ಅನ್ನವನ್ನು ನೀಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳದ್ದು : ಡಾ.ಮಲ್ಲಿಕಾರ್ಜುನ ಮುರಘರಾಜೇಂದ್ರಮಹಾಸ್ವಾಮಿಗಳು

Spread the loveಬಾಗಲಕೋಟೆ: ನಾಡಿನಲ್ಲಿ ವಿದ್ಯೆಯ ಜೊತೆಗೆ ಅನ್ನವನ್ನು ನೀಡಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ