ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಮಾದರಿಯಲ್ಲೇ, ಈಗ ಬಾಗಲಕೋಟೆ ಜಿಲ್ಲೆಯ ಹಳ್ಳೂರು ಗ್ರಾಮದಲ್ಲೂ ಭೂಗರ್ಭದಲ್ಲಿ ಅಡಗಿರುವ ಚಾಲುಕ್ಯರ ಇತಿಹಾಸವನ್ನು ಹೊರತೆಗೆಯಬೇಕೆಂಬ ಕೂಗು ಬಲವಾಗಿದೆ.
ಬಾಗಲಕೋಟೆ ತಾಲೂಕಿನ ಹಳ್ಳೂರು ಗ್ರಾಮವು ಚಾಲುಕ್ಯರ ಆಡಳಿತಾವಧಿಯಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು ಎನ್ನುವುದಕ್ಕೆ ಅಲ್ಲಿರುವ ಐತಿಹಾಸಿಕ ಬಸವೇಶ್ವರ ದೇಗುಲ, ಜೈನ ಬಸದಿ ಹಾಗೂ ಪ್ರಾಚೀನ ಶಿವ ದೇವಾಲಯಗಳೇ ಸಾಕ್ಷಿ. ಈ ಗ್ರಾಮದ ಪ್ರತಿ ಸಂದುಗೊಂದುಗಳಲ್ಲಿ ಇತಿಹಾಸದ ಕುರುಹುಗಳಿದ್ದು, ಹಲವು ಅಮೂಲ್ಯ ಶಿಲಾಶಾಸನಗಳು ಇಲ್ಲಿ ಪತ್ತೆಯಾಗಿವೆ. ಆಶ್ಚರ್ಯಕರ ಸಂಗತಿಯೆಂದರೆ, ಗ್ರಾಮದ ಕೆಲವು ಮನೆಗಳ ತಳಹದಿಯಲ್ಲೂ ಪುರಾತನ ಶಾಸನಗಳು ಸಿಗುತ್ತಿದ್ದು, ಭೂಗರ್ಭದ ಆಳದಲ್ಲಿ ಇನ್ನೂ ಅನೇಕ ದೇಗುಲಗಳು ಮತ್ತು ಐತಿಹಾಸಿಕ ಸ್ಮಾರಕಗಳು ಹುದುಗಿರಬಹುದು ಎಂಬ ಬಲವಾದ ಶಂಕೆ ಗ್ರಾಮಸ್ಥರಲ್ಲಿ ಮನೆಮಾಡಿದೆ.
ಗ್ರಾಮದಲ್ಲಿರುವ ಪುರಾತನ ಟಂಕಶಾಲೆ, ರಾಮಲಿಂಗೇಶ್ವರ ದೇಗುಲ ಮತ್ತು ವೈಶಿಷ್ಟ್ಯಪೂರ್ಣ ಬಾವಿಗಳು ಇಲ್ಲಿನ ಗತವೈಭವವನ್ನು ಸಾರುತ್ತಿವೆ. ಹೀಗಾಗಿ, ಸರ್ಕಾರ ಮತ್ತು ಪುರಾತತ್ವ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಲಕ್ಕುಂಡಿಯ ಮಾದರಿಯಲ್ಲಿ ಹಳ್ಳೂರಿನಲ್ಲೂ ವೈಜ್ಞಾನಿಕ ಉತ್ಖನನ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಸಮಗ್ರವಾಗಿ ಸಂಶೋಧನೆ ನಡೆಸಿದ್ದೇ ಆದಲ್ಲಿ, ಚಾಲುಕ್ಯರ ಕಾಲದ ಕಲೆ, ಸಂಸ್ಕೃತಿ ಮತ್ತು ಅಜ್ಞಾತವಾಗುಳಿದಿರುವ ಐತಿಹಾಸಿಕ ಸತ್ಯಗಳು ಲೋಕಕ್ಕೆ ಪರಿಚಯವಾಗುವುದರಲ್ಲಿ ಅನುಮಾನವಿಲ್ಲ.
Laxmi News 24×7