ದಾವಣಗೆರೆ: ಜಿಲ್ಲೆ ಗಣೇಶ ಚತುರ್ಥಿಗೆ ಸಿದ್ಧಗೊಳ್ಳುತ್ತಿದೆ. ಗಲ್ಲಿಗಲ್ಲಿಯಲ್ಲಿ ಗಣೇಶನ ಪೆಂಡಾಲ್ಗಳು ನಿರ್ಮಾಣವಾಗುತ್ತಿವೆ. ಈ ಬಾರಿ ಗಣೇಶನನ್ನು ಬರಮಾಡಿಕೊಳ್ಳಲು ಹಾಗೂ ನಿಮಜ್ಜನದ ವೇಳೆ ವಿಪರೀತ ಶಬ್ದ ಮಾಡುವ ಡಿಜೆಗೆ ದಾವಣಗೆರೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಜಿಲ್ಲಾಡಳಿತದ ನಡೆಗೆ ಗಣೇಶ ಮಂಡಳಿಗಳು ಆಕ್ರೋಶ ವ್ಯಕ್ತಪಡಿಸಿವೆ.
ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸೇರಿದ್ದಾಗ, ದಾವಣಗೆರೆ ಡಿಸಿ ಡಾ.ಗಂಗಾಧರ ಸ್ವಾಮಿ ಜಿ.ಎಂ. ಅವರು ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ಇಲ್ಲ ಎಂದು ಹೇಳಿದ್ದರು. ಹಾಗಾಗಿ ದಾವಣಗೆರೆ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳು, ಡಿಜೆ ಮಾಲೀಕರು ಮನವಿ ಕೊಟ್ಟು ಡಿಜೆಗೆ ಅನುಮತಿ ಕೇಳಿದ್ದರು. ಆದರೆ, ಮನವಿ ಕೊಟ್ಟವರ ಮುಂದೆಯೇ ಮತ್ತೆ ಡಿಜೆಗೆ ಮನವಿ ಕೊಡಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆ: ಡಿಜೆ ಮಾಲೀಕರು, ಗಣೇಶ ಆಯೋಜಕರು ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ಸೇರಿದರು. ಡಿಜೆಗೆ ಅವಕಾಶ ಕೊಡುವಂತೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಮತ್ತು ಎಸ್ಪಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಈ ವೇಳೆ ಜಿಲ್ಲಾಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪ್ರತಿಭಟನಾನಿರತರು ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ರಸ್ತೆ ತಡೆ ಮಾಡಲು ಮುಂದಾದರು. ಇದಕ್ಕೂ ಜಿಲ್ಲಾಡಳಿತ ಜಗ್ಗದೇ ಇದ್ದಾಗ, ಅವಕಾಶ ಕೊಡದೇ ಇದ್ದರೂ ನಾವು ಡಿಜೆ ಬಳಕೆ ಮಾಡುತ್ತೇವೆ, ಏನ್ ಮಾಡ್ತೀರಾ, ಮಾಡಿ ಎಂದು ರೇಣುಕಾಚಾರ್ಯ ಜಿಲ್ಲಾಡಳಿತಕ್ಕೆ ಸವಾಲು ಹಾಕಿದರು.
ಹೈಕೋರ್ಟ್ ಆದೇಶವೇನು?: ಸರ್ಕಾರದ ಮಟ್ಟದಲ್ಲೇ ಡಿಜೆ ನಿಷೇಧಿಸಿದ್ದು, ಬಿಜೆಪಿ ನಾಯಕರು ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿದ್ದಾರೆ. ಡಿಜೆಗೆ ಅವಕಾಶ ಕೊಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಅಲ್ಲದೇ ಹಗಲು ವೇಳೆ ಜನವಸತಿ ಪ್ರದೇಶದಲ್ಲಿ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಶಬ್ದ ಮಟ್ಟಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.
Laxmi News 24×7