ಬೆಂಗಳೂರು: ಗಾಂಧಿ ಕುಟುಂಬವನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ (ಆರ್ ಎಸ್ಎಸ್)ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಆರ್ ಎಸ್ ಎಸ್ ಮೇಲೆ ವಾಗ್ದಾಳಿ ನಡೆಸಿರುವುದರಲ್ಲಿ ಅಚ್ಚರಿ ಏನಿಲ್ಲ. ಗಾಂಧಿ ಕುಟುಂಬವನ್ನು ಮೆಚ್ಚಿಸಲು ಮತ್ತು ಕಾಂಗ್ರೆಸ್ ಹೈಕಮಾಂಡ್ ಗೆ ನಿಷ್ಠೆ ಸಾಬೀತುಪಡಿಸಲು, ಸಿಎಂ ಕುರ್ಚಿ ಉಳಿಸಿಕೊಳ್ಳಲು, ತಮ್ಮ ಸರ್ಕಾರದ ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯಲು ಆರ್ ಎಸ್ ಎಸ್ ಅನ್ನು ಟೀಕಿಸುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಇದು ಸಿಎಂ ಸಿದ್ದರಾಮಯ್ಯಗೆ ಇರುವ ಗ್ಯಾರಂಟಿ ಪರಿಹಾರವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಲವೇ ಕೆಲವರನ್ನು ಮೆಚ್ಚಿಸಲು ಕೋಟ್ಯಂತರ ದೇಶಪ್ರೇಮಿಗಳ ಕಣ್ಣಲ್ಲಿ ಚಿಕ್ಕವರಾಗಬೇಡಿ. ಸಿಎಂ ಸಿದ್ದರಾಮಯ್ಯನವರೇ, ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಆದಿಯಾಗಿ ಪಕ್ಷ, ಸೈದ್ಧಾಂತಿಕ ಹಿನ್ನೆಲೆ ಮೀರಿ ಅನೇಕ ಮಹನೀಯರು RSSನ ಸೇವೆ, ಸಮರ್ಪಣೆ, ಸಮಾನತೆ, ಭಾತೃತ್ವದ ಭಾವನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.
1934ರಲ್ಲಿ ಆರ್ ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರು ಅಲ್ಲಿ ಎಲ್ಲಾ ಸ್ವಯಂಸೇವಕರು ಜಾತಿ, ಮತ, ಕುಲದ ಭೇದವಿಲ್ಲದೆ ರಾಷ್ಟ್ರ ಸೇವೆಯ ಏಕೈಕ ಗುರಿಯೊಂದಿಗೆ ಒಟ್ಟಿಗೆ ಅನ್ಯೋನ್ಯವಾಗಿ ಒಂದೇ ತಾಯಿ ಮಕ್ಕಳಂತೆ ಇದ್ದದ್ದನ್ನು ಕಂಡು “ಜಾತಿಬೇಧ ರಹಿತ, ಅಸ್ಪೃಶ್ಯತೆ ರಹಿತ ಸಮಾಜ ನಿರ್ಮಾಣದ ನನ್ನ ಕನಸನ್ನು ಆರ್ ಎಸ್ಎಸ್ ನನಸು ಮಾಡಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದ್ದರು ಎಂದು ವಿವರಿಸಿದ್ದಾರೆ.
Laxmi News 24×7